ಹೊಸನಗರ: ಇಲ್ಲಿನ ಜೆಸಿಐ ಡೈಮಂಡ್, ಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ 4ನೇ ರಾಜ್ಯಮಟ್ಟದ ಕೃಷಿ ಮೇಳ ಜ.12, 13 ಹಾಗೂ 14ರಂದು ಇಲ್ಲಿನ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಜೆಸಿಐ ಸಂಸ್ಥೆ ಅಧ್ಯಕ್ಷ ಮಧುಸೂದನ್ ನಾವಡ ತಿಳಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಅಧ್ಯಕ್ಷತೆಯಲ್ಲಿ ಜ.12ರಂದು ಸಂಜೆ 5 ಗಂಟೆಗೆ ಸಮ್ಮೇಳನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡುವರು. ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಗತಿಪರ ರೈತರನ್ನು ಸನ್ಮಾನಿಸುವರು. ಶಾಸಕ ಆರಗ ಜ್ಞಾನೇಂದ್ರ ನಿವೃತ್ತ ಸೈನಿಕರನ್ನು ಗೌರವಿಸುವರು ಎಂದು ತಿಳಿಸಿದರು.
ವೇದಿಕೆಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕಾ ವಿವಿ ಕುಲಪತಿ ಆರ್.ಪಿ.ಜಗದೀಶ್ ಸೇರಿದಂತೆ ಕೃಷಿ ವಿಜ್ಞಾನಿಗಳು, ಪ್ರಗತಿಪರ ಕೃಷಿಕರು ಉಪಸ್ಥಿತರಿರುವರು. ಅಂದು ರಾತ್ರಿ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಜ.13ರಂದು ಸಂಜೆ ಕೀಳಂಬಿ ಮೀಡಿಯ ಲ್ಯಾಬ್ ಹೊರತಂದಿರುವ ‘ಶಾಖಾಹಾರಿ’ ಸಿನೆಮಾ ಹಾಡುಗಳ ಬಿಡುಗಡೆ ಕಾರ್ಯಕ್ರಮ, ಟೀಮ್ ಅತ್ರೇಯ ತಂಡದವರಿಂದ ಸಂಗೀತ ನೃತ್ಯ ಕಾರ್ಯಕ್ರಮ ಇರುತ್ತದೆ. ಸಂಸದ ಬಿ.ವೈ.ರಾಘವೇಂದ್ರ ಶಾಖಾಹಾರಿ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡುವರು. ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ವಿವಿಧ ಗಣ್ಯರು ಹಾಜರಿರುವರು.
ಜ.14ರಂದು ಕೃಷಿ ಹಾಗೂ ತೋಟಗಾರಿಕೆ ಕುರಿತಂತೆ ವಿವಿಧ ಗೋಷ್ಠಿಗಳು, ರೈತರೊಡನೆ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ತೋಟಗಾರಿಕೆ ವಿವಿ ವಿಜ್ಞಾನಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ರಾಜ್ಯದ ವಿವಿಧ ಭಾಗದಿಂದ ಕೃಷಿ ಯಂತ್ರ, ಉಪಕರಣ, ಬೀಜ, ರಾಸಾಯನಿಕ ಹಾಗೂ ಸಾವಯವ ಗೊಬ್ಬರ, ವಿವಿಧ ಸಸಿಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಹಾಕಲಾಗಿದೆ. ತಾಲ್ಲೂಕಿನ ರೈತರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಜೆಸಿಐ ಡೈಮಂಡ್ ಸಂಸ್ಥೆಯ ಹಿರಿಯ ಸದಸ್ಯ ರಾಜೇಶ ಕೀಳಂಬಿ, ವಿನಾಯಕ ಅರೆಮನೆ, ಎಸ್.ಅರವಿಂದ, ಜೆಸಿ ಸಂದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.