ಹೊಸನಗರ: ತಾಲ್ಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತ ನೋಡಲು ಬಂದಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ.
ಬಳ್ಳಾರಿ ಮೂಲದ ವಿನೋದ್ (26) ನೀರಿನಲ್ಲಿ ಕೊಚ್ಚಿ ಹೋದ ಯುವಕ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.
ಬೆಂಗಳೂರಿನಿಂದ ಪ್ರವಾಸ ಬಂದಿದ್ದ 12 ಜನ ಯುವಕರು ಅಬ್ಬಿ ಜಲಪಾತ ನೋಡಲು ಭಾನುವಾರ ಮಧ್ಯಾಹ್ನ ಬಂದಿದ್ದರು. ಜಲಪಾತದ ಕಲ್ಲುಗಳನ್ನು ಹತ್ತುವಾಗ ಯುವಕ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.
ಪ್ರವಾಸಿಗರು ಜಲಪಾತದ ಹತ್ತಿರ ಹೋಗದಂತೆ ಕಂದಕ ಹೊಡೆಯಲಾಗಿದೆ. ಇದನ್ನೂ ಲೆಕ್ಕಿಸದೆ ಯುವಕರು ನೀರಿಗೆ ಇಳಿದಿದ್ದರು. ಮಳೆಯಾಗುತ್ತಿರುವ ಕಾರಣ ಸುತ್ತಮುತ್ತ ಪಾಚಿ ಬೆಳೆದಿದ್ದು, ಕಾಲುಜಾರಿ ಈ ಅವಘಡ ಸಂಭವಿಸಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲಿ ವಿನೋದ್ ಅವರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.