ADVERTISEMENT

ಕನ್ನಡ ಫಲಕ ಅಳವಡಿಸಲು ಆಗ್ರಹ, ಜ.5ಕ್ಕೆ ಗಡವು

ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 13:48 IST
Last Updated 29 ಡಿಸೆಂಬರ್ 2023, 13:48 IST
ಶಿವಮೊಗ್ಗ ನಗರದಲ್ಲಿ ಕನ್ನಡ ಭಾಷೆ ಹೊರತು ಪಡಿಸಿ ಅನ್ಯ ಭಾಷೆಯ ನಾಮಫಲಕ ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಿವಮೊಗ್ಗ ನಗರದಲ್ಲಿ ಕನ್ನಡ ಭಾಷೆ ಹೊರತು ಪಡಿಸಿ ಅನ್ಯ ಭಾಷೆಯ ನಾಮಫಲಕ ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಶಿವಮೊಗ್ಗ: ಇಲ್ಲಿ ಕನ್ನಡ ಭಾಷೆ ಹೊರತು ಪಡಿಸಿ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪಾಲಿಕೆ ವ್ಯಾಪ್ತಿಯ ಎಲ್ಲಾ ಅಂಗಡಿ ಮಂಗಟ್ಟುಗಳ ಎದುರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನ್ಯ ಭಾಷೆಯ ನಾಮಫಲಕ ತೆರವುಗೊಳಿಸಬೇಕು. ನಾಮಫಲಕ ಶೇ.60 ರಷ್ಟು ಕನ್ನಡ ಭಾಷೆಯಲ್ಲಿಯೇ ಇರಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನವಿದೆ. ಇಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸಲು ಕಾಯಿದೆ ಕೂಡ ಇದೆ. ಇದನ್ನು ಗಾಳಿಗೆ ತೂರಿ ಆಂಗ್ಲ ಹಾಗೂ ಬೇರೆ ಭಾಷೆಯ ನಾಮಫಲಕಗಳನ್ನು ಬಹಿರಂಗವಾಗಿ ತೂಗು ಹಾಕಲಾಗಿದೆ. ಇದರ ಅರಿವಿದ್ದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ದೂರಿದರು.

ADVERTISEMENT

ಹೊರಗಿನಿಂದ ಬಂದವರಿಗೆ ನಮ್ಮ ನೆಲ ಬೇಕು, ನಮ್ಮ ನೀರು ಬೇಕು. ನಮ್ಮ ಭಾಷೆ ಬೇಡವೇ? ಇಲ್ಲಿ ಬದುಕುತ್ತಿರುವವರು ಹಾಗೂ ವ್ಯಾಪಾರ–ವಹಿವಾಟು ನಡೆಸುತ್ತಿರುವವರು ಕನ್ನಡ ಭಾಷೆಯಲ್ಲಿಯೇ ವ್ಯವಹಾರಿಸಬೇಕು. ಕನ್ನಡ ಕಡ್ಡಾಯವಾಗಿ ಕಲಿಯಬೇಕು ಎಂದು ಆಗ್ರಹಿಸಿದರು.

ಈ ನಿಯಮ ಜನವರಿ 5 ರೊಳಗೆ ಜಾರಿ ಆಗಬೇಕು. ಇಲ್ಲವಾದರೆ, ಸಂಘಟನೆಯಿಂದಲೇ ತೆರವು ಕಾರ್ಯ ಆಗಲಿದೆ. ಇದು ಮುಂದುವರೆದರೆ ಬೃಹತ್ ಹೋರಾಟ ಕೂಡ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ನಗರ ಘಟಕ ಅಧ್ಯಕ್ಷ ಎಚ್. ಪ್ರಫುಲ್ಲಾಚಂದ್ರ, ವಿಜಯ್, ರಾಮು, ಸತೀಶ್, ಸಂತೋಷ್,ಕೇಶವ, ಪರಮೇಶ್, ಮೊಹಮ್ಮದ್ ಷಫಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.