ಕಾರ್ಗಲ್: ಇಲ್ಲಿಗೆ ಸಮೀಪದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರೂರು ಗ್ರಾಮದ ತಳಕಳಲೆ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಒತ್ತುವರಿ ಮಾಡಿದ್ದ 6 ಎಕರೆ ಕಂದಾಯ ಭೂಮಿಯನ್ನು ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಅವರ ಆದೇಶದ ಮೇರೆಗೆ ಗುರುವಾರ ತೆರವುಗೊಳಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ವಿನಾಯಕ ಎಂ.ಎನ್. ಮಾಹಿತಿ ನೀಡಿದ್ದಾರೆ.
ಬಿದರೂರು ಗ್ರಾಮದಲ್ಲಿ ಈ ಹಿಂದೆ ತೆರವುಗೊಳಿಸಿದ್ದ ಕಂದಾಯ ಭೂಮಿಯಲ್ಲಿ ಎಸ್.ಎನ್.ನದಾಫ್ ಮತ್ತು ಮೊಹಮ್ಮದ್ ಹನೀಫ್ ಎಂಬವರು ಅಕ್ರಮ ಒತ್ತುವರಿಯನ್ನು ಮುಂದುವರಿಸಿದ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕಂದಾಯ ಇಲಾಖಾಧಿಕಾರಿಗಳು ಪರೀಶೀಲನೆ ಮಾಡಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳಾದ ಉಪತಹಶೀಲ್ದಾರ್ ಎಚ್.ಸಿ. ಪರಶುರಾಮಪ್ಪ ಮತ್ತು ಸಿಬ್ಬಂದಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಮತ್ತು ಸಿಬ್ಬಂದಿ, ಉಪ ವಲಯ ಅರಣ್ಯಾಧಿಕಾರಿ ಮೈಲಾರಪ್ಪ ಮತ್ತು ಸಿಬ್ಬಂದಿ, ವನ್ಯಜೀವಿ ಉಪ ವಲಯಾರಣ್ಯಾಧಿಕಾರಿ ಸುಧಾಕರ್ ಮತ್ತು ಸಿಬ್ಬಂದಿ ಹಾಗೂ ಅರಳಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದರು.
ಭಾರಂಗಿ ಹೋಬಳಿಯ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆನ್ನಿ, ಹಿರೇಹೆನ್ನಿ ಭಾಗದಲ್ಲಿಯೂ ಕಳೆದ 15 ದಿನಗಳ ಹಿಂದೆ ಎರಡು ಭೂ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ಉಪತಹಶೀಲ್ದಾರ್ ಪರಶುರಾಮಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.