ಕೋಣಂದೂರು: ಇಲ್ಲಿನ ಮುಖ್ಯರಸ್ತೆಯ ಕಾಮಗಾರಿ ನಡೆಯುತ್ತಿರುವಾಗ ಪೈಪ್ಲೈನ್ ತುಂಡಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಆದ್ದರಿಂದ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಇಲ್ಲಿನ ಮುಖ್ಯರಸ್ತೆಯ ಕಾಮಗಾರಿ ಒಂದು ತಿಂಗಳಿನಿಂದ ನಡೆಯುತ್ತಿದೆ. 15 ದಿನಗಳಿಂದ ಗ್ರಾಮದ ಗ್ರಾಮಸ್ಥರಿಗೆ ಸರಿಯಾದ ಕುಡಿಯುವ ನೀರು ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ರಸ್ತೆ ಕಾಮಗಾರಿ ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ. ಕುಡಿಯುವ ನೀರಿಗಾಗಿ ಈ ಹಿಂದೆ ಹಾಕಲಾಗಿದ್ದ ಪೈಪ್ಲೈನ್ ತುಂಡಾಗಿದೆ. ಇದರಿಂದ ಗ್ರಾಮದ ಬಹುತೇಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ’ ಎಂದು ದೂರಿದರು.
‘ಅಂಗಡಿ, ಹೋಟೆಲ್ಗಳಿಗೆ ಸಾಕಾಗುವಷ್ಟು ಪ್ರಮಾಣದ ನೀರು ಸಿಗುತ್ತಿಲ್ಲ. ಇದ್ದ ಕೆಲವು ತೆರೆದ ಬಾವಿಗಳಲ್ಲಿಯೂ ನೀರು ಇಲ್ಲ. ಇದರಿಂದ ಮೊದಲಿದ್ದ ಪೈಪ್ಲೈನ್ ತೆಗೆಯುವಾಗ ಬದಲಿ ವ್ಯವಸ್ಥೆಯ ನಂತರ ಕಾಮಗಾರಿ ಪ್ರಾರಂಭ ಮಾಡಬೇಕಿತ್ತು’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
‘ಅಗತ್ಯ ಇರುವವರಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಆದರೆ, ಜನಸಂಖ್ಯೆ ಮತ್ತು ಬೇಡಿಕೆಗೆ ಅನುಗುಣವಾಗಿ ನೀರು ಪೂರೈಸಲು ಸಾಧ್ಯ ಆಗುತ್ತಿಲ್ಲ. ಇದರಿಂದ ಕೆಲವರಿಗೆ ಮಾತ್ರ ನೀರು ಸಿಗುತ್ತಿದೆ. ಟ್ಯಾಂಕರ್ ನೀರು ಗ್ರಾಹಕರಿಗೆ ತೃಪ್ತಿ ತರುತ್ತಿಲ್ಲ. ಇದರಿಂದ ಶೀಘ್ರ ಬದಲಿ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಗ್ರಾಮ ಆಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.