ಶಿವಮೊಗ್ಗ: ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ 4 ದಿನಗಳಿಂದ ನಡೆಯುತ್ತಿದ್ದ ಕೃಷಿ–ತೋಟಗಾರಿಕೆ ಮೇಳವು ಸೋಮವಾರ ಸಂಪನ್ನಗೊಂಡಿತು.
ರೈತರು, ಯುವಜನರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮೇಳಕ್ಕೆ ಬಂದರು. ಬಹುತೇಕ ಮಳಿಗೆಗಳು ಜನದಟ್ಟಣೆಯಿಂದ ಕೂಡಿದ್ದವು.
ಸಾವಯವ ಕೃಷಿ ಪದ್ಧತಿ, ನೀರಾವರಿ, ಮಣ್ಣಿನ ಸತ್ವ ಬಗ್ಗೆ, ಉತ್ತಮವಾಗಿ ಇಳುವರಿ ಪಡೆಯುವುದು ಹೇಗೆ?, ಕೃಷಿಯಲ್ಲಿ ತಾಂತ್ರಿಕತೆ ಮೈಗೂಡಿಸಿಕೊಳ್ಳುವುದು ಹೇಗೆ, ಬೆಳೆಗಳಿಗೆ ರೋಗ ತಗುಲಿದಾಗ ಅದರಿಂದ ಮುಕ್ತಿ ಪಡೆಯವುದು ಹೇಗೆ, ಸಿರಿಧಾನ್ಯಗಳ ಮಾಹಿತಿ, ಕೃಷಿ ಯಂತ್ರೋಪಕರಣಗಳ ಬಗ್ಗೆ ಹೀಗೆ ವಿಭಿನ್ನವಾದ ಮಾಹಿತಿಯನ್ನು ಪಡೆದುಕೊಂಡರು. ಒಂದೇ ಸೂರಿನಡಿ ಸಮಗ್ರವಾದ ಮಾಹಿತಿ ರೈತರಿಗೆ ಲಭಿಸಿತು.
ಜಿಲ್ಲೆಯಲ್ಲಿ ವಿಪರೀತ ಮಳೆಯ ನಡುವೆಯೂ ಸೋಮವಾರ ಮಳೆರಾಯ ಕೊಂಚ ಬಿಡುವು ಕೊಡುತ್ತಿದ್ದಂತೆಯೇ ಮೇಳ ಜೀವ ಪಡೆಯಿತು. ನೆರೆಯ ಜಿಲ್ಲೆಗಳಿಂದ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕೊನೆಯ ದಿನ ಜನರು ಬಂದರು.
ಹೆಚ್ಚಿನ ಪ್ರಮಾಣದಲ್ಲಿ ಯುವಜನರು, ಮಹಿಳೆಯರು ಬಂದಿದ್ದರು. ಯುವಕರನ್ನು ಕಂಡು ಅಧಿಕಾರಿಗಳ ವಲಯದಲ್ಲಿ ಖುಷಿ ಮೂಡಿತು.
ಮಳೆಯ ನಡುವೆಯೂ ಮೇಳ ಯಶಸ್ವಿಗೊಳಿಸಿದ್ದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.