ತೀರ್ಥಹಳ್ಳಿ: ‘ನೆರೆಯ ರಾಷ್ಟ್ರಗಳೆಂದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಡುಕ ಆರಂಭವಾಗುತ್ತದೆ. ದೇಶದ ಒಳಗೆ ಸುಳ್ಳುಗಳಿಂದ ವಿಜೃಂಭಿಸುವ ಅವರ ವ್ಯಕ್ತಿತ್ವ ವಿದೇಶಗಳಲ್ಲಿ ಬೇರೆ ರೀತಿಯಲ್ಲೇ ಕಾಣುತ್ತಿದೆ. ಅದಕ್ಕೆ ಚೀನಾ-ಭಾರತ ವಿದೇಶಾಂಗ ನೀತಿಗಳೇ ಸಾಕ್ಷಿ’ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಬಿಜೆಪಿಯು ಜಾತಿ, ಧರ್ಮಗಳನ್ನು ವಿಭಜಿಸುತ್ತಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು.
‘ಮೋದಿ ಅವರು ಜಿಎಸ್ಟಿ ಮೂಲಕ ಕರ್ನಾಟಕದಿಂದ ಸಂಗ್ರಹಿಸುವ ಹಣವನ್ನು ಉತ್ತರ ಪ್ರದೇಶ, ಗುಜರಾತ್ ಹಾಗೂ ಬಿಜೆಪಿ ಆಡಳಿತದ ರಾಜ್ಯ ಸರ್ಕಾರದ ಅಭಿವೃದ್ಧಿಗೆ ನೀಡುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಖಾರದ ಪುಡಿ, ಹಾಕಿ ರಾಜ್ಯ ಸರ್ಕಾರಕ್ಕೆ ಚೊಂಬು ನೀಡಿದ್ದಾರೆ. ‘40 ಪರ್ಸೆಂಟ್’ ಸರ್ಕಾರಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಕೇಂದ್ರದ ಖಾಲಿ ಚೊಂಬು ಸರ್ಕಾರವನ್ನು ಕೆಳಗಿಳಿಸಲು ಕಾಂಗ್ರೆಸ್ಗೆ ಜನ ಮತ ನೀಡಬೇಕು’ ಎಂದರು.
‘ಕಾಂಗ್ರೆಸ್ ಹಿಂದೂ, ಮುಸ್ಲಿಂ, ಸಿಖ್, ಪಾರ್ಸಿ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಸಮುದಾಯದ ಸಂಸ್ಕೃತಿ ಆಚಾರ, ವಿಚಾರಗಳ ರಕ್ಷಣೆ ಮಾಡುತ್ತದೆ. ಭಾರತ ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಿವೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ, ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 8,335 ರೂಪಾಯಿ ಹೆಚ್ಚುವರಿ ಹಣ ಸಿಗಲಿದೆ. ಇದರಿಂದ ಕೌಟುಂಬಿಕ ನಿರ್ವಹಣಾ ಸಾಮರ್ಥ್ಯ ವೃದ್ಧಿಯಾಗಲಿದೆ. ಆರ್ಥಿಕ ಸ್ವಾವಲಂಬನೆ ಸಿಗಲಿದೆ’ ಎಂದು ವಿವರಿಸಿದರು.
‘ಎಐಸಿಸಿ ಚುನಾವಣಾ ಪ್ರಣಾಳಿಕೆಯಲ್ಲಿ ಸಂಪತ್ತಿನ ಮರು ಹಂಚಿಕೆ ಕುರಿತು ಯಾವುದೇ ಪದ ಬಳಕೆ ಮಾಡಿಲ್ಲ. ಸ್ಯಾಮ್ ಪಿತ್ರೋಡಾ ಬರೆದಿರುವ ಲೇಖನವನ್ನು ಮೋದಿ ತಿರುಚಿ ಹೇಳಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಘಟಕದ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.