ಶಿವಮೊಗ್ಗ: ಮನುಷ್ಯ ಪರಿಸರ ನಾಶಮಾಡುತ್ತಿದ್ದಾನೆ. ಹಿಂದೆಯೂ ಮಾಡಿದ್ದ, ಮುಂದೆಯೂ ಮಾಡುತ್ತಾನೆ. ಹೀಗಾಗಿ ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳು ಅಪಾಯದ ಅಂಚಿನಲ್ಲಿವೆ ಎಂದು ಅಂಕಣಕಾರ ಬಿ. ಚಂದ್ರೇಗೌಡ ಹೇಳಿದರು.
ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿರುವ ಸರ್.ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಸಹಯೋಗದಲ್ಲಿ ಗೋಣಿಬೀಡು ರಾಮಮಂದಿರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಪರಿಸರದ ಮೇಲಿನ ದೌರ್ಜನ್ಯ ಕುರಿತು ಅವರು ಉಪನ್ಯಾಸ ನೀಡಿದರು.
ಕೈಗಾರಿಕಾ ಕ್ರಾಂತಿಯಿಂದ ಮನುಷ್ಯ ಯಂತ್ರಗಳನ್ನು ಅವಲಂಬಿಸಿದ. ಕೇವಲ 200 ವರ್ಷಗಳ ಅವಧಿಯಲ್ಲಿ ಗುಡ್ಡ, ಬೆಟ್ಟ, ಹೆದ್ದಾರಿ, ಕಾಡು, ನದಿ, ಆಣೆಕಟ್ಟೆ ಎಲ್ಲವನ್ನೂ ನಿರ್ಮಿಸಿದ. ಪರಿಣಾಮ ಲಕ್ಷಾಂತರ ಮರಗಳ ಮಾರಣಹೋಮ ಮಾಡಿದ್ದರ ಪರಿಣಾಮವಾಗಿ ಪರಿಸರ ನಾಶವಾಯಿತು ಎಂದರು.
‘ಮರ ಕಡಿದರೆ ಬರೀ ನೆರಳು ಮಾತ್ರ ಮಾಯವಾಗುವುದಿಲ್ಲ. ಅದರಲ್ಲಿನಲಿ ಪಕ್ಷಿಗಳು, ಕೀಟಗಳು ಎಲ್ಲವೂ ನಾಶ ವಾಗುತ್ತವೆ. ವಾತಾವರಣ ಬಿಸಿಯಾಗುತ್ತದೆ. ನಿಸರ್ಗದ ಮೇಲೆ ಒತ್ತಡ ಹೆಚ್ಚಿ ಭೂಮಂಡಲವು ವಿನಾಶದತ್ತ ಸಾಗುತ್ತಿರುವುದನ್ನು ಗಮನಿಸಬೇಕು. ಇಲ್ಲಿ ನಾವು ಯಾರನ್ನೂ ಸುಖವಾಗಿಡಲು ಆಗುತ್ತಿಲ್ಲ. ಹೈಟೆಕ್ ಆಸ್ಪತ್ರೆಗಳು ಹೆಚ್ಚಾಗುತ್ತಿವೆ. ಮನುಷ್ಯನ ಭವಿಷ್ಯ ಆತಂಕದಲ್ಲಿದೆ’ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ‘ಪರಿಸರದ ಮೇಲಾಗುತ್ತಿರುವ ಆಕ್ರಮಣ ಕುರಿತು ಜನಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಈ ಭೂಮಿಯಲ್ಲಿರುವ ಎಲ್ಲ ಚರಾಚರ ಜೀವಿಗಳಿಗೂ ಬದುಕಲು ಹಕ್ಕಿದೆ ಎನ್ನುವುದನ್ನು ಮರೆಯಬಾರದು. ಕಾಡಿದ್ದರೆ ಮಳೆ. ಕಾಡು ಕಡಿದಿದ್ದರ ಪರಿಣಾಮ ಮಳೆ ಬಾರದ ಸ್ಥಿತಿ ಬಂದಿದೆ’ ಎಂದರು.
ಉಪನ್ಯಾಸಕರಾದ ಎಸ್.ಎಂ. ಮುತ್ತಯ್ಯ, ರಂಗಕರ್ಮಿ ಜಿ.ಆರ್. ಲವ, ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಅರಸಯ್ಯ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಿಲ್ಲಾ ಕಾರ್ಯದರ್ಶಿ ಎಂ.ಎಂ. ಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ ಉಪಸ್ಥಿತರಿದ್ದರು.
ನಿವೇದಿತಾ ಸ್ವಾಗತಿಸಿದರು. ನಿರೂಪಣೆ ಸಿಂಧು, ಗಾನಶ್ರೀ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.