ADVERTISEMENT

ಪತಿಗೆ ಕಳಂಕ ಬರಬಾರದೆಂದು ಮುಡಾಗೆ ಪತ್ರ ಬರೆದ ಪಾರ್ವತಮ್ಮ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 15:31 IST
Last Updated 1 ಅಕ್ಟೋಬರ್ 2024, 15:31 IST

ಶಿವಮೊಗ್ಗ: ‘ನಿವೇಶನಗಳನ್ನು ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರು ಮುಡಾಕ್ಕೆ ಪತ್ರ ಬರೆದಿದ್ದಾರೆ ಅಂದರೆ ತಪ್ಪು ಮಾಡಿದ್ದಾರೆ ಅಂತಾ ಅಲ್ಲ. ನನ್ನ ಪತಿಗೆ ಕಳಂಕ ಬರಬಾರದು. ನನ್ನಿಂದ ತೊಂದರೆ ಆಗಬಾರದು ಅಂತಾ ಪತ್ರ ಬರೆದಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

‘ಸಿಎಂ ಮೇಲೆ ಪ್ರಕರಣ ದಾಖಲಾಗಿದೆ. ಕಾನೂನು ಪ್ರಕಾರ ಹೋರಾಟ ಮಾಡುತ್ತಾರೆ. ಕೇಂದ್ರ ಸರ್ಕಾರ ಇದರಲ್ಲಿ ಇ.ಡಿ. ತರುವುದು ಸರಿಯಲ್ಲ. ಬಿಜೆಪಿಯವರು ರಾಜೀನಾಮೆ ಕೇಳುತ್ತಾರೆ ಅಂತಾ ಇಲ್ಲಿ ರಾಜೀನಾಮೆ ಕೊಡುವವರು ಯಾರು ಇದ್ದಾರೆ. ರಾಜೀನಾಮೆ ಕೊಡಬೇಕು ಅಂತಾ ನಿಯಮ ಇದೆಯಾ’ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 

‘ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರೇ ಮುಡಾ ವಿಷಯ ಮುಂದಿಟ್ಟು ನೀವು ಪಾದಯಾತ್ರೆ ಮಾಡಿದ್ದೀರಾ ಅಲ್ಲವೇ ನಿಮ್ಮ ಅಫಿಡವಿಟ್‌ನಲ್ಲಿ ಏನು ಇದೆ ನೋಡಿದ್ದೀರಾ? ಅದರಲ್ಲಿ ನಾನು ಭ್ರಷ್ಟ, ನನ್ನ ಮೇಲೆ ಎಫ್‌ಐಆರ್‌ ಇದೆ ಅಂತಾ ಬರೆದಿದ್ದಾರೆ. ನಿಮಗೆ ನಾಚಿಕೆ ಆಗುವುದಿಲ್ಲವೇ?’ ಎಂದು ಕುಟುಕಿದರು. 

ADVERTISEMENT

‘ಸಿಎಂ ಸಿದ್ದರಾಮಯ್ಯ ಜೊತೆಗೆ 136 ಶಾಸಕರು ಇದ್ದಾರೆ. ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಮತ್ತು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ ವಿಜಯೇಂದ್ರ ನಡುವೆ ಮುಡಾ ವಿಷಯ ಟ್ವೀಟ್ ಮಾಡಲು ನಾ ಮುಂದು ತಾ ಮುಂದು ಅಂತಿದ್ದಾರೆ. ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ.  ಉತ್ತಮ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರು ಕಾನೂನು ಮೂಲಕ ಮುಡಾ ಪ್ರಕರಣದಲ್ಲಿ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.