ADVERTISEMENT

ಡೆಂಗಿ ಹೆಚ್ಚಳ, ಪಾಲಿಕೆ ನಿದ್ರಿಸುತ್ತಿದೆ: ಕೆಬಿಪಿ ಆರೋಪ

-

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:56 IST
Last Updated 3 ಜುಲೈ 2024, 15:56 IST
ಕೆ.ಬಿ.ಪ್ರಸನ್ನಕುಮಾರ್
ಕೆ.ಬಿ.ಪ್ರಸನ್ನಕುಮಾರ್   

ಶಿವಮೊಗ್ಗ: ‘ಇಲ್ಲಿನ ಮಹಾನಗರ ಪಾಲಿಕೆ ನಿದ್ರಿಸುತ್ತಿದೆ. ಜನರ ಹಿತ ಮರೆತಿದೆ, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ’ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಈಗ ಅಧಿಕಾರಿಗಳ ಕೈಯಲ್ಲಿದೆ. ಆದರೆ ಅವರು ನಗರದ ಅಭಿವೃದ್ಧಿಯನ್ನೇ ಮರೆತಿದ್ದಾರೆ ಎಂದು ದೂರಿದರು.

‘ಇಡೀ ನಗರದಲ್ಲಿ ಸ್ವಚ್ಛತೆಯಿಲ್ಲದೆ, ಕಸದ ರಾಶಿ ಎಲ್ಲಡೆ ಕಂಡು ಬರುತ್ತಿದೆ. ಅವ್ಯವಸ್ಥೆಯ ಆಗರವಾಗಿದೆ. ಸೊಳ್ಳೆ ನಿಯಂತ್ರಣ ಇಲ್ಲವೇ ಇಲ್ಲ. ಪರಿಣಾಮ ನಗರದಲ್ಲೆಡೆ ಡೆಂಗಿ ಜ್ವರ ಹೆಚ್ಚಳಗೊಂಡಿದೆ. ಸಣ್ಣ ಸಣ್ಣ ಗಲ್ಲಿಯ ಆಸ್ಪತ್ರೆಗಳಲ್ಲೂ ಸಾರ್ವಜನಿಕರು ಚಿಕಿತ್ಸೆಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಹಂದಿ, ನಾಯಿಗಳ ಕಾಟ ಬೇರೆ. ಒಟ್ಟಾರೆ ಇಡೀ ನಗರದ ಚಿತ್ರಣವೇ ಬದಲಾಗಿದೆ’ ಎಂದರು.

ADVERTISEMENT

‘ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆ ನನೆಗುದಿಗೆ ಬಿದ್ದಿದೆ. ಸ್ವಲ್ಪ ಮಳೆ ಬಂದರೂ ಸಾಕು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ರಾಜಕಾಲುವೆ ಸೇರಿದಂತೆ ಚರಂಡಿಗಳಲ್ಲಿ ಹೂಳು ತುಂಬಿದೆ. ಪರಿಣಾಮ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಕೆಲವು ಕಡೆ ಕುಡಿಯುವ ನೀರಿನ ನಳಗಳಿಗೂ ಸೇರ್ಪಡೆಯಾಗುತ್ತಿದೆ’ ಎಂದು ಆರೋಪಿಸಿದರು. 
 
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಗಂಧದ ಮನೆ ನರಸಿಂಹ, ರಾಮಕೃಷ್ಣ, ತ್ಯಾಗರಾಜ್, ಬೊಮ್ಮನಕಟ್ಟೆ ಮಂಜು, ಸಂಗಯ್ಯ, ಸಿದ್ದಪ್ಪ, ಮಧುಸೂದನ್, ಕಶ್ಯಪ್, ಲೋಹಿತ್, ನಿಯಾಲ್, ಸುನಿಲ್, ಮಾಧವಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.