ಶಿವಮೊಗ್ಗ: ಕಳೆದ 10 ದಿನಗಳಿಂದ ಬಿಟ್ಟೂಬಿಡದೇ ಕಾಡಿದ ಮಳೆ, ಮಂಗಳವಾರದಿಂದ ಬಿಡುವು ನೀಡಿದೆ. ಬುಧವಾರ ಇಡೀ ದಿನ ನಗರದಲ್ಲಿ ಬಿಸಿಲಿನ ವಾತಾವರಣ ಇತ್ತು. ಆಗಾಗ ಮೋಡ ಮುಚ್ಚಿದರೂ ಮಳೆ ಮಾತ್ರ ಇಣುಕಲಿಲ್ಲ.
ಮಳೆಯ ಆರ್ಭಟಕ್ಕೆ ಶಿವಮೊಗ್ಗ ತಾಲ್ಲೂಕಿನ ಕೆರೆ–ಕಟ್ಟೆಗಳು ತುಂಬಿದ್ದು, ಬಹಳಷ್ಟು ಕೋಡಿ ಬಿದ್ದಿವೆ. ಮಳೆಯ ಆಟಾಟೋಪ ಕಡಿಮೆ ಆಗಿ 48 ಗಂಟೆ ಕಳೆದರೂ ಇನ್ನೂ ಹೊಲಗಳಲ್ಲಿ ನೀರು ನಿಂತಿದೆ. ಕೆರೆಗಳಿಂದ ಕೋಡಿ ಹರಿಯುತ್ತಿದೆ. ಹಳ್ಳ–ಕೊಳ್ಳಗಳು ಇನ್ನೂ ತುಂಬಿ ಹರಿಯುತ್ತಿವೆ. ಶಿವಮೊಗ್ಗ ನಗರದಲ್ಲಿ ತುಂಗೆ ಮೈದುಂಬಿದ್ದಾಳೆ.
ಶಿವಮೊಗ್ಗ ತಾಲ್ಲೂಕಿನ ಮನ್ನೀಕೆರೆ ಗ್ರಾಮದ ಬೂದಿಗೆರೆ ಕೋಡಿ ಬಿದ್ದಿದೆ. ಇದರಿಂದ ಸುತ್ತಲಿನ ನೂರಾರು ಎಕರೆ ತೋಟ–ಗದ್ದೆಗಳು ಜಲಾವೃತಗೊಂಡು ಬೆಳೆ ಹಾನಿಗೀಡಾಗಿವೆ. ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಮೂರು ಮನೆಗಳು ಬಿದ್ದಿವೆ. ಗ್ರಾಮದ ಎ.ಕೆ.ವಿಶ್ವನಾಥ್, ರಹಮತ್ ಉಲ್ಲಾ ಹಾಗೂ ನೀಲಪ್ಪ ಎಂಬುವವರ ಮನೆಗಳು ಕುಸಿದುಬಿದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.