ರಿಪ್ಪನ್ಪೇಟೆ: ಸಮೀಪದ ಸುರಳಿಕೊಪ್ಪ ಗ್ರಾಮದಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ, ನಂತರ ಹೊಸನಗರ ಸಮೀಪದ ಪಟಗುಪ್ಪ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ಸದಾನಂದ ಭಟ್ ಆತ್ಮಹತ್ಯೆ ಮಾಡಿಕೊಂಡವರು.
ಸದಾನಂದ ಮತ್ತು ಸಬಿತಾ ನಡುವೆ 12 ವರ್ಷಗಳಿಂದ ಕೌಟುಂಬಿಕ ಕಲಹವಿತ್ತು. ಕಳೆದ ನಾಲ್ಕು ವರ್ಷಗಳಿಂದ ಒಂದೇ ಮನೆಯಲ್ಲಿ ಇಬ್ಬರು ಬೇರೆ ಬೇರೆ ಅಡುಗೆ ಮಾಡಿಕೊಂಡು ಜೀವನ ಸಾಗಿಸುತಿದ್ದರು.
ಇಬ್ಬರ ನಡುವೆ ಬುಧವಾರ ಮಾತಿನ ಕಲಹ ನಡೆದಿದ್ದು, ಈ ಸಂದರ್ಭದಲ್ಲಿ ಕುಪಿತಗೊಂಡ ಗಂಡ ಹೆಂಡತಿಯ ತಲೆ ಹಾಗೂ ಮೈ ಕೈಗೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಪೆಟ್ಟು ಬಿದ್ದಿದ್ದ ಸಬಿತಾ ಸ್ಥಳದಲ್ಲೇ ಮೂರ್ಛೆ ಹೋಗಿದ್ದಾರೆ. ಸಬಿತಾ ಅವರ ಚಿಕ್ಕಪ್ಪನ ಮಗ ರಿಪ್ಪನ್ಪೇಟೆ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಶಿವಮೊಗ್ಗದ ನಾರಾಣಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಡನ ದೈಹಿಕ ಹಲ್ಲೆಯಿಂದ ಬೇಸತ್ತ ಹೆಂಡತಿ ಸಬಿತಾ, ರಿಪ್ಪನ್ಪೇಟೆ ಠಾಣೆಯಲ್ಲಿ ಗಂಡನಿಂದ ಜೀವ ಭಯ ಇರುವ ಕುರಿತು ಗುರುವಾರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ಪಿ ಅವರು, ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಮುಂದಾಗಿದ್ದರು.
ಘಟನೆಯ ನಂತರ ವಿಚಲಿತನಾದ ಪತಿ, ಹೊಸನಗರ ಸಮೀಪದ ಪಟಗುಪ್ಪ ಸೇತುವೆ ಬಳಿ ತಮ್ಮ ಕಾರು ನಿಲ್ಲಿಸಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಎನ್ನಲಾಗಿದೆ. ಆರೋಪಿಯ ಕಾರು ಪಟಗುಪ್ಪ ಸೇತುವೆ ಬಳಿ ದೊರಕಿದ್ದು, ಅದನ್ನು ಹೊಸನಗರ ಪೊಲೀಸರ ವಶಕ್ಕೆ ನೀಡಲಾಗಿದೆ. ಪಟಗುಪ್ಪ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಶುಕ್ರವಾರ ಬೆಳಿಗ್ಗೆ ಸದಾನಂದ ಭಟ್ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ಪೇಟೆ ಹಾಗೂ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.