ಸಾಗರ: ವಿಜ್ಞಾನ ಮತ್ತು ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ವೈದ್ಯಕೀಯ ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಅವುಗಳನ್ನು ವೈದ್ಯರು ಸಮರ್ಥವಾಗಿ ಎದುರಿಸಬೇಕಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಹೇಳಿದರು.
ಇಲ್ಲಿನ ಸಂಜಯ ವಿದ್ಯಾಕೇಂದ್ರದಲ್ಲಿ ಜ್ಞಾನಸಾಗರ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಸಂಸ್ಥೆ ವತಿಯಿಂದ ಬುಧವಾರ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಲೋಕಕ್ಕೆ ನಿಲುಕದ ಹೊಸ ರೋಗಗಳಿಗೆ ಕಾರಣಗಳನ್ನು ಹುಡುಕುವ ಹಾಗೂ ಪರಿಣಾಮಕಾರಿ ಚಿಕಿತ್ಸೆ ಮಾರ್ಗಗಳನ್ನು ಕಂಡುಕೊಳ್ಳುವ ಸವಾಲು ಯುವ ವೈದ್ಯರ ಮೇಲೆ ಇದೆ ಎಂದರು.
ಇತರ ವೃತ್ತಿಗಳಂತೆ ವೈದ್ಯ ವೃತ್ತಿ ಕೂಡ ವಾಣಿಜ್ಯೀಕರಣಗೊಂಡಿದೆ ಎಂಬುದು ನಿಜ. ಆದರೆ ಇಂದಿಗೂ ಅನೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗು ತೊರೆದು ರೋಗಿಗಳ ಸೇವೆ ಮಾಡುವ ಹಲವು ವೈದ್ಯರು ನಮ್ಮ ನಡುವೆ ಇದ್ದಾರೆ. ಇಂತಹ ವೈದ್ಯರನ್ನು ಯುವ ವೈದ್ಯರು ಮಾದರಿಯಾಗಿ ಪರಿಗಣಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ತಾಲ್ಲೂಕಿನಲ್ಲಿ ಡೆಂಗಿ ಜ್ವರದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಜ್ವರ, ತಲೆ ನೋವು, ಮೈಕೈ ನೋವು, ವಾಂತಿಯಂತಹ ಲಕ್ಷಣ ಕಾಣಿಸಿಕೊಂಡಾಗ ರೋಗಿಗಳು ತಡ ಮಾಡದೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಭರತ್ ತಿಳಿಸಿದರು.
ಆರೋಗ್ಯ ಇಲಾಖೆಯ ಲಲಿತಾ, ಸುರೇಶ್ ಎ. ಉಪನ್ಯಾಸ ನೀಡಿದರು. ಸುಮಾ, ಸುಪ್ರಿತಾ ಎಸ್., ತೇಜಸ್ವಿನಿ, ನಿಕಿತಾ ಇದ್ದರು. ಭಾರ್ಗವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸ್ನೇಹ ಸ್ವಾಗತಿಸಿದರು. ಸುಪ್ರಿತಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.