ಹೊಳೆಹೊನ್ನೂರು: ‘ಅಪಘಾತದಲ್ಲಿ ಬದುಕುಳಿದವರ ಜೀವನವನ್ನು ಕಟ್ಟುವ ಕೆಲಸವಾಗಬೇಕು’ ಎಂದು ಬೆಂಗಳೂರಿನ ಗವಿಪುರದ ಗೋಸಾಯಿ ಮರಾಠ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ಹಾವೇರಿಯಲ್ಲಿ ಈಚೆಗೆ ನಡೆದ ಅಪಘಾತದಲ್ಲಿ ಮೃತಪಟ್ಟವರ ಸಮೀಪದ ಎಮ್ಮೇಹಟ್ಟಿಯಲ್ಲಿರುವ ಮನೆಗಳಿಗೆ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
‘ರಾಜ್ಯದಲ್ಲಿ ಮರಾಠ ಸಮುದಾಯದ ಜನಸಂಖ್ಯೆ 60 ಲಕ್ಷಕ್ಕೂ ಹೆಚ್ಚಿದೆ. ನೋವಿನಲ್ಲಿರುವವರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ‘ಸಂಘ–ಸಂಸ್ಥೆಗಳು ನೊಂದವರ ನೆರವಿಗೆ ನಿಲ್ಲಬೇಕು’ ಎಂದರು.
‘ಹುಟ್ಟು ಅನಿವಾರ್ಯವಾದರೆ ಸಾವು ನಿಶ್ಚಿತ. 13 ಜನ ಮೃತಪಟ್ಟಿರುವ ಅಪಘಾತವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಚಿಕಿತ್ಸಾ ವೆಚ್ಚ ಭರಿಸುವುದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು’ ಎಂದು ಚನ್ನಗಿರಿ ಕೇದಾರ ಶಾಖಾ ಮಠದ ಶಿವ ಶಾಂತವೀರ ಸ್ವಾಮೀಜಿ ಹೇಳಿದರು.
‘ಕೇಂದ್ರ ಸರ್ಕಾರ ಎಮ್ಮೇಹಟ್ಟಿ ಪ್ರಕರಣವನ್ನು ರಾಷ್ಟ್ರದ ಆಘಾತ ಎಂದು ಘೋಷಿಸಬೇಕು. ಎಲ್ಲಾ ಸೌಲಭ್ಯಗಳನ್ನು ಮೃತಪಟ್ಟವರ ಕುಟುಂಬಗಳಿಗೆ ನೀಡಬೇಕು. ಶೀಘ್ರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಲಾಗುವುದು’ ಎಂದು ರೈತ ಸಂಘದ ನಾಯಕ ಕೆ.ಟಿ. ಗಂಗಾಧರ್ ಹೇಳಿದರು.
ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಯಶವಂತರಾವ್ ಘೋಪರ್ಡೆ, ಮರಾಠ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ರಾವ್, ನಿವೃತ್ತ ಮುಖ್ಯಶಿಕ್ಷಕ ಹಾಲೋಜಿರಾವ್, ಸಚಿನ್ ಸಿಂದ್ಯಾ, ವೀರೇಶ್, ಡಿ.ಯಲ್ಲಪ್ಪ, ಮಲ್ಲೇಶಪ್ಪ, ಬಾಳೋಜಿ ಬಸವರಾಜ್, ಬಾಳೋಜಿ ಕೃಷ್ಣೋಜಿರಾವ್, ಮಲ್ಲೇಶ್ ರಾವ್ (ಕಗ್ಗಿ), ರಂಗೋಜಿರಾವ್, ಬಸವರಾಜ್, ಮಂಜುನಾಥರಾವ್, ಕಿರಣ್ಮೊರೆ, ಮುರಾರಿರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.