ಶಿಕಾರಿಪುರ: ಸುಳ್ಳು ಭರವಸೆ ನೀಡಿ ದೇಶದ ಜನರಿಗೆ ಮೋಸ ಮಾಡಿದ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜಯಕುಮಾರ್ ಕರೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಖಾಲಿ ಚೊಂಬಿನ ಸರ್ಕಾರವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕು. ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಗ್ಯಾರಂಟಿ ಯೋಜನೆ ಬಗ್ಗೆ ತಿಳಿಸುವ ಮೂಲಕ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಹೆಚ್ಚು ಮತ ಕೊಡಿಸಬೇಕು ಎಂದು ಕರೆ ನೀಡಿದರು.
‘ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದಿಂದ ತೆರಿಗೆ ಮೂಲಕ ಪಡೆದ ಹಣವನ್ನು ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆಗಳನ್ನು ನಡೆಸಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ತೆರಿಗೆ ಹಣ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿ ಹೋರಾಟ ಮಾಡಿದ ಪರಿಣಾಮ, ರಾಜ್ಯಕ್ಕೆ ₹3,000 ಕೋಟಿ ಮಾತ್ರ ಬಿಡುಗಡೆ ಮಾಡಿದೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಡಾ.ರಾಘವೇಂದ್ರ, ಎಸ್.ಪಿ. ನಾಗರಾಜಗೌಡ, ಸದಸ್ಯ ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಮ್, ಮುಖಂಡರಾದ ಎಚ್.ಎಸ್. ರವೀಂದ್ರ, ಉಳ್ಳಿ ದರ್ಶನ್, ರೋಶನ್, ಉಮೇಶ್ ಮಾರವಳ್ಳಿ, ರಾಘವೇಂದ್ರನಾಯ್ಕ, ಶಿವ್ಯಾನಾಯ್ಕ, ಬಡಗಿ ಫಾಲಾಕ್ಷ, ಭಂಡಾರಿ ಮಾಲತೇಶ್, ಶ್ರೀಧರ ಕರ್ಕಿ, ಸತೀಶ್, ಗಾಮ ದಯಾನಂದ್, ನಗರದ ರವಿಕಿರಣ್, ರೇಣುಕಾಸ್ವಾಮಿ, ಹುಲ್ಮಾರ್ ಶಿವು, ರಾಜು ಉಡುಗಣಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.