ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕವಾದ ಆರ್. ಪ್ರಸನ್ನಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಕಾಂಗ್ರೆಸ್ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಪ್ರಸನ್ನಕುಮಾರ್, ‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸಲು ನಾವೆಲ್ಲರೂ ಹಗಲಿರುಳು ಶ್ರಮ ಪಡೋಣ. ಜನರ ಬಳಿ ಹೋಗೋಣ. ರಾಹುಲ್ ಅವರ ಘೋಷ ವಾಕ್ಯದಂತೆ ನನ್ನ ಬೂತ್, ನನ್ನ ಜವಾಬ್ದಾರಿ ಎಂದು ನಡೆದುಕೊಳ್ಳೋಣ’ ಎಂದರು.
ಎಚ್.ಎಸ್. ಸುಂದರೇಶ್ ಮಾತನಾಡಿ, ‘ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ. ಅತ್ಯಂತ ಕಷ್ಟಕಾಲದಲ್ಲಿ ನನಗೆ ಈ ಹುದ್ದೆ ಸಿಕ್ಕಿತ್ತು. ಬಿಜೆಪಿಯ ವಿರುದ್ಧ ಹೋರಾಟ ಮಾಡುವುದು ಅಷ್ಟು ಸುಲಭವೂ ಆಗಿರಲಿಲ್ಲ. ಆದರೆ ಅದನ್ನೆಲ್ಲ ಎದುರಿಸಿದ್ದೇನೆ. ಹಲವು ಬಾರಿ ನಿಷ್ಠುರವಾಗಿ ನಡೆದಿದ್ದೇನೆ. ಸೂಡಾ ಅಧ್ಯಕ್ಷನಾಗಿದ್ದರಿಂದ ಈ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ’ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರಮೇಶ್, ನಾಗರಾಜ ಗೌಡ, ದಕ್ಷಿಣ ಬ್ಲಾಕ್ ವಿಭಾಗದ ಅಧ್ಯಕ್ಷ ಕಲೀಂ ಪಾಷಾ, ಎಸ್.ಪಿ.ದಿನೇಶ್, ಮಧು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.