ಸೊರಬ: ‘ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು, ನನ್ನ ಸ್ಪರ್ಧೆಯನ್ನು ಸಾಮಾನ್ಯ ಮತದಾರರು ಪಕ್ಷಾತೀತವಾಗಿ ಒಪ್ಪಿಕೊಳ್ಳುತ್ತಿರುವುದರಿಂದ ಗೆಲುವು ನಿಶ್ಚಿತವಾಗಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದಲ್ಲಿ ದೇಶಭಕ್ತ ಬಳಗ ಕಾರ್ಯಕರ್ತರ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ನನಗೆ ಬೆಂಬಲ ದೊರೆಯುತ್ತಿದ್ದು, ಎಲ್ಲ ಕಡೆಗಳಲ್ಲೂ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ. ಹಿರಿತನ ಹಾಗೂ ನಿಷ್ಠೆಗೆ ಪಕ್ಷದಲ್ಲಿ ನನಗೆ ಆಗಿರುವ ಅನ್ಯಾಯವನ್ನು ಸಾಮಾನ್ಯ ಮತದಾರರು ಸಹಿಸುತ್ತಿಲ್ಲ. ಇದರಿಂದ ಮತಗಳು ಕ್ರೋಢೀಕರಣಗೊಂಡು ಗೆಲುವು ಸನ್ನಿಹಿತವಾಗಲಿದೆ. ನನ್ನ ಪರವಾಗಿ ಯಾರೂ ಸ್ಟಾರ್ ಪ್ರಚಾರಕರು ಇಲ್ಲದೆ ಇರಬಹುದು. ಆದರೆ ಮತದಾರರೆ ನನಗೆ ಸ್ಟಾರ್ ಪ್ರಚಾರಕರು ಆಗಿದ್ದಾರೆ. ನನ್ನ ಸ್ವಾಭಿಮಾನದ ಗೆಲುವಿಗೆ ಪ್ರತಿ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿ ಗೆಲ್ಲಿಸಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ ಎಂದು ತಿಳಿಸಿದರು.
‘ಯಡಿಯೂರಪ್ಪ ಅವರು ನನ್ನನ್ನು ರಾಜಕೀಯವಾಗಿ ಅಸ್ಥಿರಗೊಳಿಸಲು ಯುವ ಬ್ರಿಗೇಡ್ ಸಂಘಟನೆ ಬಗ್ಗೆ ಹೈಕಮಾಂಡ್ಗೆ ದೂರು ನೀಡಿದ್ದರು. ಹೆಮ್ಮರವಾಗಿ ಬೆಳೆದು ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯ ರಾಜಕೀಯವಾಗಿ ಸಶಕ್ತಗೊಳ್ಳುವುದನ್ನು ತಪ್ಪಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಅಪ್ಪ, ಮಕ್ಕಳ ಹಿಡಿತದಿಂದ ಮುಕ್ತಗೊಳಿಸಿ ಪಕ್ಷವನ್ನು ಶುದ್ಧೀಕರಣಗೊಳಿಸಲು ನಾನು ಸ್ಪರ್ಧೆ ಮಾಡಿದ್ದೇನೆ’ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯಾರನ್ನು ಬೆಂಬಲಿಸಲಿದೆ ಎನ್ನುವ ಪ್ರಶ್ನೆಗೆ ‘ನೂರಕ್ಕೆ ನೂರರಷ್ಟು ಜೆಡಿಎಸ್ ನನ್ನ ಬೆಂಬಲಕ್ಕೆ ನಿಲ್ಲಲಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಮಾನಸಿಕವಾಗಿ ನನ್ನ ಸ್ಪರ್ಧೆ ಬೆಂಬಲಿಸಲಿದ್ದಾರೆ’ ಎಂದರು.
ಏಪ್ರಿಲ್ 12ರಂದು ನಾಮಪತ್ರ ಸಲ್ಲಿಸಲಿದ್ದು, ಸುಮಾರು 25 ಸಾವಿರ ಜನರು ಭಾಗವಹಿಸಲಿದ್ದು, ರಾಮಣ್ಣಶೆಟ್ಟಿ ಪಾರ್ಕ್ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಪ್ರಭಾಕರ್ ರಾಯ್ಕರ್, ಅಣ್ಣಾಜಿಗೌಡ, ಅಣ್ಣಪ್ಪ, ಮಂಜುನಾಥ್, ಮಹೇಶಗೌಳಿ, ಅಶೋಕ ಯಲವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.