ತೀರ್ಥಹಳ್ಳಿ: ಕನ್ನಡ ಸಾಹಿತ್ಯ ಪರಿಷತ್, ಸಾಹಿತ್ಯಾಸಕ್ತರ ಬಳಗ, ಅನಘ ಮಹಿಳಾ ಬಹುಉದ್ದೇಶಿತ ಸಹಕಾರ ಸಂಘದ ಸಹಯೋಗದಲ್ಲಿ ಕುವೆಂಪು ರಸ್ತೆಯ ಬಂಟರ ಭವನದಲ್ಲಿ ಜುಲೈ 13ರಂದು ಸಂಜೆ 4ಕ್ಕೆ ‘ಕಾಳಿಂಗ ಕಥನ’ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಸಾಹಿತಿ ಶಿವಾನಂದ ಕರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಳಿಂಗ ಸರ್ಪವನ್ನು ಕೇಂದ್ರೀಕರಿಸಿ ಪಶ್ಚಿಮಘಟ್ಟದ ಜೀವವೈವಿಧ್ಯತೆ, ಸ್ಥಳೀಯ ಸಮಸ್ಯೆ, ಪ್ರಾಣಿಗಳ ಜೊತೆಗಿನ ಒಡನಾಟ, ಧೂಮನಂತಹ ಅಲಕ್ಷಿತ ಸಮುದಾಯದ ಸಾಹಸ, ಅರಣ್ಯ ಕಾರಿಡಾರ್ ಅನಾಹುತಗಳ ಮೇಲೆ ಕೃತಿ ಬೆಳಕುಚೆಲ್ಲಲಿದೆ ಎಂದು ತಿಳಿಸಿದ್ದಾರೆ.
ಪುಸ್ತಕವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಬಿಡುಗಡೆ ಮಾಡಲಿದ್ದಾರೆ. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಧ್ಯಾಪಕ ಜಯಶಂಕರ ಹಲಗೂರು ಪುಸ್ತಕ ಕುರಿತು ಮಾತನಾಡಲಿದ್ದಾರೆ. ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯಾಸಕ್ತರ ಬಳಗದ ಕಡಿದಾಳ್ ದಯಾನಂದ, ಅನಘ ಸೊಸೈಟಿ ಅಧ್ಯಕ್ಷೆ ಮಮತಾ ಸಾಯಿನಾಥ್, ಸಾಹಿತಿ ಕಲೀಮ್ ಉಲ್ಲಾ, ಕೃತಿಯ ಲೇಖಕ ನೆಂಪೆ ದೇವರಾಜ್ ಇರಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.