ಸಾಗರ: ಬರಹಗಳಲ್ಲಿ ಸದಾ ಹೊಸತನವನ್ನು ಕಾಪಿಟ್ಟುಕೊಂಡಿರುವುದು ಕನ್ನಡ ಪತ್ರಿಕೋದ್ಯಮದ ವಿಶೇಷತೆಯಾಗಿದೆ ಎಂದು ಬರಹಗಾರ ಪೂರ್ಣಪ್ರಜ್ಞ ಬೇಳೂರು ಹೇಳಿದರು.
ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ವಂಶವಾಹಿನಿ ಟ್ರಸ್ಟ್ ಹಾಗೂ ಪತ್ರಿಕಾ ಸ್ನೇಹಿತರು ಈಚೆಗೆ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಕನ್ನಡ ಪತ್ರಿಕೆಗಳು ಹಿಂದಿನಿಂದಲೂ ತೋರುತ್ತಾ ಬಂದಿವೆ ಎಂದರು.
‘ಪತ್ರಿಕೆಗಳು ರಂಜನೆ, ಮಾಹಿತಿಯ ಜೊತೆಗೆ ಜ್ಞಾನವನ್ನು ಸಸರಿಸುವ ಕೆಲಸ ಮಾಡುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು, ಯುವಜನರು ಪ್ರತಿದಿನವೂ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದವರು ಪತ್ರಿಕೆ ಓದಿನ ಬಗ್ಗೆ ಉಲ್ಲೇಖಿಸುತ್ತಾರೆಯೇ ಹೊರತು ಇತರ ಮಾಧ್ಯಮಗಳ ಕುರಿತು ಮಾತನಾಡಿದ ಉದಾಹರಣೆಗಳಿಲ್ಲ’ ಎಂದು ಅವರು ಹೇಳಿದರು.
‘ಸುದ್ದಿಗಳ ಸತ್ಯಾಸತ್ಯತೆ ವಿಷಯದಲ್ಲಿ ಮುದ್ರಣ ಮಾಧ್ಯಮ ಇಂದಿಗೂ ತನ್ನ ವಿಶ್ವಾಸರ್ಹತೆಯನ್ನು ಉಳಿಸಿಕೊಂಡು ಬಂದಿದೆ. ಹೀಗಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಮಾತ್ರ ಸತ್ಯ ಎಂದು ಜನ ನಂಬುತ್ತಾರೆ. ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ಕೂಡ ಪತ್ರಿಕೆಗಳು ಮಾಡುತ್ತಿವೆ’ ಎಂದರು.
ನಗರಸಭೆ ಸದಸ್ಯೆ ಸವಿತಾ ವಾಸು ಕಾರ್ಯಕ್ರಮ ಉದ್ಘಾಟಿಸಿದರು. ವಂಶವಾಹಿನಿ ಟ್ರಸ್ಟ್ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ಎಚ್., ಉಪನ್ಯಾಸಕ ಶಿವಾನಂದ ಎಸ್.ಭಟ್ ಇದ್ದರು.
ಸಕಲ ಪ್ರಾರ್ಥಿಸಿದರು. ರಾಜೇಶ್ ಭಡ್ತಿ ಸ್ವಾಗತಿಸಿದರು. ಶ್ರೀಪಾದ ಕವಲಕೋಡು ವಂದಿಸಿದರು. ಶಾಲಿನಿ, ಸುಷ್ಮಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.