ತುಮಕೂರು: ಪೊಲೀಸ್ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ನಗರದಲ್ಲಿ ಶನಿವಾರ ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಪೊಲೀಸರು ಒಂದು ಕಡೆ ಒಂದು ವರ್ಷ ಕೆಲಸ ನಿರ್ವಹಿಸಿದರೆ ವರ್ಗಾವಣೆ ಮಾಡಲು ಅವಕಾಶವಿದೆ. ಈ ನಿಯಮವನ್ನು ಸಡಿಲಿಸಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ವರ್ಗಾವಣೆಗೆ ಸಂಬಂಧಿಸಿದ ಸೇವಾ ನಿಯಮಾವಳಿಗಳನ್ನು ಸಡಿಲಿಸಲಾಗುವುದು ಎಂದು ಹೇಳಿದರು.
ಆಡಳಿತದಲ್ಲಿ ಚುರುಕು ತರಲು ವರ್ಗಾವಣೆಯೊಂದೇ ಅಸ್ತ್ರವಲ್ಲ. ಇಂತಹ ವರ್ಗಾವಣೆ ಮೇಲೆ ನನಗೆ ನಂಬಿಕೆ ಇಲ್ಲ. ಒಂದೇ ಸ್ಥಳದಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ನೀಡಿದರೆ ಜನಸಾಮಾನ್ಯರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವರ್ಗಾವಣೆ ಮಾಡಬೇಕಾಗುತ್ತದೆ ಎಂದರು.
ನೌಕರರಿಗೆ ವರ್ಗಾವಣೆ ಹೆಸರಿನಲ್ಲಿ ತೊಂದರೆ ಕೊಡುವುದಿಲ್ಲ. ಆದರೆ ಅಧಿಕಾರಿಗಳು ಯಾರಿಗೂ ಅನ್ಯಾಯ ಮಾಡದೆ, ಮೇಲು–ಕೀಳು, ಬೇಧ–ಭಾವ ಮಾಡದೆ ಕೆಲಸ ನಿರ್ವಹಿಸಬೇಕು. ಸಾಮಾನ್ಯ ಜನರಿಗೂ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.