ತುಮಕೂರು: ಅನಧಿಕೃತವಾಗಿ ಹಾವು ಹಿಡಿದವರಿಗೆ 3ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಹಾವು ಸೇರಿ ವನ್ಯ ಜೀವಿ ಸಂಪತ್ತು ರಕ್ಷಿಸಲು ಎಲ್ಲರು ಕೈ ಜೋಡಿಸಬೇಕು ಎಂದು ವನ್ಯಜೀವಿ ಜಾಗೃತಿ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಗುರುವಾರ ‘ಮಾನವ– ಹಾವುಗಳ ಸಂಘರ್ಷ, ನಿರ್ವಹಣೆ ಮತ್ತು ಉಪಶಮನ’ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ತರಬೇತಿ ಹೊಂದಿದವರು ಮಾತ್ರ ಹಾವು ಹಿಡಿಯಬೇಕು. ಹಾವು ಕಂಡವರು ಭಯಪಡದೆ ತರಬೇತಿ ಹೊಂದಿದವರಿಗೆ ಮಾಹಿತಿ ನೀಡಬೇಕು. ಹಾವುಗಳನ್ನು ಹಿಡಿದವರು ಹಾವಿನ ಜೀವಕ್ಕೆ ಹಾನಿ ಮಾಡದೆ ಸುರಕ್ಷಿತ ಸ್ಥಳಕ್ಕೆ ಬಿಡಬೇಕು ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ, ‘ಹಾವು ಹಿಡಿಯುವ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಮನೆಗಳಿಗೆ ಹಾವು ಬಂದರೆ ನನಗೆ ಹಾವು ಹಿಡಿಯುವ ಕೌಶಲ ತಿಳಿದಿದೆ ಎಂದು ಹಿಡಿಯಲು ಹೋಗುವಂತಿಲ್ಲ. ಮೊದಲು ತಮ್ಮ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು’ ಎಂದರು.
ಅರಣ್ಯ ಇಲಾಖೆಯ ಮಲ್ಲಿಕಾರ್ಜುನ್, ಮಹೇಶ್ ಮಾಲಗತ್ತಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.