ತುಮಕೂರು: ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕಿ ಬಾ.ಹ.ರಮಾಕುಮಾರಿ ಅವರನ್ನು ಲೇಖಕಿಯರ ಸಂಘ, ಓದು ಲೇಖಕಿ ಬಳಗ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನದಿಂದ ನಗರದಲ್ಲಿ ಈಚೆಗೆ ಅಭಿನಂದಿಸಲಾಯಿತು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜ, ‘ರಮಾಕುಮಾರಿ ಅವರು ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಯಾವುದೇ ಪ್ರಶಸ್ತಿ, ಸನ್ಮಾನಗಳಿಗೆ ಆಸೆ ಪಡದೆ, ನಿಸ್ವಾರ್ಥವಾಗಿ ದುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜಕೀಯಕ್ಕೂ ಬಂದು ಮಹಿಳೆಯರ ಪರ ದನಿ ಎತ್ತಬೇಕು’ ಎಂದು ಮನವಿ ಮಾಡಿದರು.
ಓದು ಬಳಗದ ಸಂಚಾಲಕಿ ಆಶಾ ಬಗ್ಗನಡು, ‘ಜನಪರ ಕಾಳಜಿಯ ಲೇಖಕಿಯಾಗಿ, ಸಾಮಾಜಿಕ ಬದ್ಧತೆಯನ್ನು ಉಸಿರಾಡುತ್ತಾ, ದನಿ ಇಲ್ಲದವರ ಧ್ವನಿಯಾಗಿದ್ದಾರೆ. ದಣಿವರಿಯದೆ ದುಡಿಯುತ್ತಿರುವ ಈ ಜೀವವೇ ಒಂದು ಸೋಜಿಗ’ ಎಂದು ಅಭಿಪ್ರಾಯಪಟ್ಟರು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಸಿ.ಎ.ಇಂದಿರಾ, ‘ರಮಾಕುಮಾರಿ ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ರೂಪಿಸಿದವರು. ಬರಹಗಾರ್ತಿಯರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಅರಿವಿನ ಪಯಣದ ಮೂಲಕ ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವಲ್ಲಿಯೂ ಮುಂದಾಳತ್ವ ವಹಿಸಿದ್ದಾರೆ’ ಎಂದರು.
ವಿವಿಧ ಸಂಘಗಳ ಪದಾಧಿಕಾರಿಗಳಾದ ಜಲಜಾ ಜೈನ್, ಪಾರ್ವತಮ್ಮ ರಾಜಕುಮಾರ್, ಕಮಲ ನರಸಿಂಹ, ಸುನಂದಮ್ಮ, ಭಾರ್ಗವಿ, ಎಂ.ಜಿ.ಪ್ರಿಯಾಂಕಾ, ಉಮಾದೇವಿ ಗ್ಯಾರಳ್ಳ, ಶ್ವೇತಾ ಮಹೇಂದ್ರ, ಶೈಲಾ ನಾಗರಾಜು, ಮರಿಯಂಬೀ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.