ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಶೆಟ್ಟೀಕೆರೆ ಹೋಬಳಿ ಅಗಸರಹಳ್ಳಿ ಗ್ರಾಮದ ಹೇಮಾವತಿ ನಾಲೆ ಪಕ್ಕದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಒಂದು ವರ್ಷದ ಗಂಡು ಚಿರತೆ ಗುರುವಾರ ಬಿದ್ದಿದೆ.
ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಆಗಾಗ್ಗೆ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಸುತ್ತಮುತ್ತಲ ಹಳ್ಳಿಗಳಷ್ಟೇ ಅಲ್ಲದೆ ದಬ್ಬೆಘಟ್ಟ ಕೆರೆ, ತರಬೇನಹಳ್ಳಿ ಬಳಿಯೂ ಚಿರತೆ ಹಲವು ಸಲ ಕಾಣಿಸಿಕೊಂಡಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಲ್ಲಿ ಬೋನು ಇಟ್ಟಿತ್ತು.
ಗುರುವಾರ ಮುಂಜಾನೆ 8 ಗಂಟೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸಮೇತ ಬೋನನ್ನು ಹೊಸಹಳ್ಳಿ ಸಸ್ಯಕ್ಷೇತ್ರಕ್ಕೆ ತಪಾಸಣೆಗೆ ಕೊಂಡೊಯ್ದರು. ಅಲ್ಲಿ ತಾಲ್ಲೂಕು ಪಶು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಎನ್. ವಿರೂಪಾಕ್ಷ ಅವರು ಚಿರತೆ ಮರಿಯ ವೈದ್ಯಕೀಯ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಿದರು. ನಂತರ ಬನ್ನೇರುಘಟ್ಟಕ್ಕೆ ಸಾಗಿಸಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಗೌರಿಶಂಕರ್, ಗಸ್ತು ಅರಣ್ಯಪಾಲಕ ಕುಮಾರ್ ಹಾಗೂ ಸಿಬ್ಬಂದಿ ಸೇರಿ ವಲಯ ಅರಣ್ಯಾಧಿಕಾರಿ ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.