ತುಮಕೂರು: ಪ್ರಸ್ತುತದ ಪ್ರಜಾರಾಜ್ಯದಲ್ಲಿ ಎಲ್ಲರು ರಾಮರಾದರೆ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಶ್ರೀರಾಮ, ರಾವಣ ಇಬ್ಬರು ಆದರ್ಶ ಪುರುಷರು. ಸಮಾಜದಲ್ಲಿ ಹೇಗೆ ಇರಬೇಕು ಎನ್ನುವುದಕ್ಕೆ ರಾಮ ಆದರ್ಶ, ಹೇಗೆ ಇರಬಾರದು ಎಂಬುವುದಕ್ಕೆ ರಾವಣ ಆದರ್ಶ. ಪ್ರತಿಯೊಬ್ಬರು ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ರಾಮನಂತೆ ಬದುಕಬೇಕು. ಮುಂದಿನ ಪೀಳಿಗೆಗೆ ರಾಮನ ಆದರ್ಶ ತಿಳಿಸಲು ರಾಮ ಮಂದಿರಬೇಕು. ಇದೇ ಉದ್ದೇಶದಿಂದ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಲಾಗಿದೆ ಎಂದರು.
ನಮ್ಮಲ್ಲಿರುವುದನ್ನು ಇನ್ನೊಬ್ಬರ ಜತೆ ಹಂಚಿ ತಿನ್ನುವ, ಇತರರ ಕಷ್ಟಕ್ಕೆ ಸ್ಪಂದಿಸುವ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಈ ಮುಖಾಂತರ ರಾಮರಾಜ್ಯ ಕಟ್ಟಲು ಕೈಜೋಡಿಸಬೇಕು ಎಂದು ಹೇಳಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ನಮ್ಮಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನ ನೀಡಲಾಗಿದೆ. ಗುರು ಎಂದರೆ ಬೆಳಕು, ಜ್ಞಾನ, ಸೇವೆ. ಸಮಾಜದ ಭಾರ ಹೊತ್ತುಕೊಂಡವರು ನಿಜವಾದ ಗುರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾಡಿದ ಸಂಘಟನೆ, ಸೇವೆ, ತ್ಯಾಗ ನಾವು ನೆನಪಿಸಿಕೊಳ್ಳಬೇಕು. ಅವರು ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು’ ಎಂದು ಸ್ಮರಿಸಿದರು.
ಪ್ರಸನ್ನತೀರ್ಥ ಸ್ವಾಮೀಜಿ ರಾಮ ಮಂದಿರದಲ್ಲಿ 48 ದಿನಗಳ ಕಾಲ ಮಂಗಳ ಪೂಜೆ ಮಾಡಿದ್ದರು. ಧರ್ಮ, ಉಪದೇಶ ಮೀರಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಪ್ರಸನ್ನತೀರ್ಥ ಸ್ವಾಮೀಜಿ ಹಿಂದೂ ಸಮಾಜದಲ್ಲಿ ಇರುವ ಅಸಮತೋಲನ ಸರಿ ಮಾಡಲು, ಸಮಾಜ ಒಡೆದು ಹೋಗುವುದನ್ನು ತಪ್ಪಿಸಲು, ಧರ್ಮ ಉಳಿಸಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.
ಸಮಾರಂಭದ ಪ್ರಯುಕ್ತ ಶಂಕರ ಮಠದಿಂದ ಪ್ರಸನ್ನತೀರ್ಥ ಸ್ವಾಮೀಜಿ ಶೋಭಾಯಾತ್ರೆ ನಡೆಯಿತು. ಬಿ.ಎಚ್.ರಸ್ತೆಯಿಂದ ಸಾಗಿ ಅಶೋಕ ರಸ್ತೆ ಮೂಲಕ ಎಂಪ್ರೆಸ್ ಕಾಲೇಜು ತಲುಪಿತು. ಗುರುವಂದನಾ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಸ್.ಪರಮೇಶ್, ಕಾರ್ಯಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.