ಗುಬ್ಬಿ: ಪರಿಶಿಷ್ಟ ಸಮುದಾಯಗಳು ಸಂಘಟಿತರಾದರೆ ಮಾತ್ರ ಮುಖ್ಯಮಂತ್ರಿ ಹಾಗೂ ಪ್ರಧಾನಿಯಂತಹ ಹುದ್ದೆ ಪಡೆಯಲು ಸಾಧ್ಯ ಎಂದು ಛಲವಾದಿ ಸಮುದಾಯದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಅಭಿನಂದನಾ ಹಾಗೂ ಛಲವಾದಿ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ಬಳಿಕ ಪರಿಶಿಷ್ಟ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಬಲಾಢ್ಯರು ಪರಿಶಿಷ್ಟ ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಸಮುದಾಯ ಸಂಘಟನೆಗೊಂಡು ಹೋರಾಟ ನಡೆಸಿದರೆ ಮಾತ್ರ ಸಾಮಾಜಿಕ ಮುಖ್ಯವಾಹಿನಿಗೆ ಬರಲು ಸಾದ್ಯ ಎಂದರು.
ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ಸರ್ಕಾರ ಜಾತಿಗಣತಿ ವರದಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಡಾ.ನಾಗಭೂಷಣ್ ಮಾತನಾಡಿ, ಪರಿಶಿಷ್ಟ ಸಮುದಾಯ ಸಂಘಟಿತರಾಗದಿದ್ದಲ್ಲಿ ಭೀಮವಾದವು ತುಳಿತಕ್ಕೆ ಒಳಗಾಗಿ ಮತ್ತೊಮ್ಮೆ ಮನುಸ್ಮೃತಿ ವಿಜೃಂಭಿಸಲಿದೆ. ಈ ದೇಶದ ಮೂಲನಿವಾಸಿಗಳು ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಶಿಕ್ಷಣ ಪಡೆದು ವಿಚಾರವಂತರಾಗಿ ಪರಿಸ್ಥಿತಿ ಗ್ರಹಿಸಿ ಜಾಗೃತರಾಗಬೇಕಿದೆ ಎಂದು ಹೇಳಿದರು.
ಬಸವವಾನಂದ ಸ್ವಾಮೀಜಿ, ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ, ಗೌರವಾಧ್ಯಕ್ಷ ಲೋಕೇಶ್, ಯುವಘಟಕದ ಅಧ್ಯಕ್ಷ ಎಚ್.ಕೆ.ಮಧು, ಮುಖಂಡರಾದ ಶ್ವೇತ ಜಗದೀಶ್, ರಮೇಶ್, ನಾಗರಾಜು, ವತ್ಸಲ, ಛಲವಾದಿ ಮಹಾಸಭಾದ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.