ADVERTISEMENT

‍ಪಾವಗಡ ಕೋಟೆ ಕೆಡವಿ ಖಾಸಗಿ ಕಟ್ಟಡ ನಿರ್ಮಾಣ ಆರೋಪ: ಧರಣಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:19 IST
Last Updated 17 ಸೆಪ್ಟೆಂಬರ್ 2024, 15:19 IST
ಪಾವಗಡ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಧರಣಿ ನಡೆಸಿದರು
ಪಾವಗಡ ತಹಶೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಧರಣಿ ನಡೆಸಿದರು   

ಪಾವಗಡ: ಪಟ್ಟಣದ ಪಾವಗಡ ಕೋಟೆ ಕೆಡವಿ ಕಾನೂನುಬಾಹಿರವಾಗಿ ಖಾಸಗಿ ಕಟ್ಟಡ ನಿರ್ಮಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು.

‘ಪಟ್ಟಣದ ಮುಖ್ಯ ಅಂಚೆ ಕಚೇರಿ ಬಳಿಯ ಕೋಟೆ ಗೋಡೆಗೆ ಹೊಂದಿಕೊಂಡು ಸುಮಾರು 12 ಅಡಿ ಆಳ ತೆಗೆದು ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಕೋಟೆ ಗೋಡೆ ಕುಸಿದಿದೆ. ಇದೇ ಸ್ಥಳದಲ್ಲಿ ಕೊಳವೆ ಬಾವಿ ತೆಗೆಸಲಾಗಿದೆ. ಖಾಸಗಿ ವ್ಯಕ್ತಿಗಳ ಸ್ವಾರ್ಥಕ್ಕೆ ನೂರಾರು ವರ್ಷಗಳ ಐತಿಹಾಸಿಕ ಕೋಟೆ ಗೋಡೆ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಪಟ್ಟಣದ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಮಳೆ ಬಂದರೆ ಪಟ್ಟಣದ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಕೋಟೆ ಗೋಡೆ ಹಾಳಾಗಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡದ ಭೂರಹಿತರಿಗೆ ಬಗರ್ ಹುಕುಂ ಅಡಿ ಭೂಮಿ ಮಾಂಜೂರು ಮಾಡಬೇಕು. ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಬೇಕು. ಸೋಲಾರ್ ಕಂಪನಿಗೆ ರೈತರು ನೀಡಿರುವ ಜಮೀನುಗಳಲ್ಲಿದ್ದ ವಿದ್ಯುತ್ ಪರಿವರ್ಕಗಳು ಕಳವಾಗಿರುವ ಬಗ್ಗೆ ತನಿಖೆ ನಡೆಸಬೇಕು. ಜಂಗಮರಹಳ್ಳಿ, ಬೋಡರಹಳ್ಳಿ ದಲಿತರಿಗೆ ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಾಲ್ಮೀಕಿ ಜಾಗೃತಿ ವೇದಿಕೆ ಸಂಚಾಲಕ ಬೇಕರಿ ನಾಗರಾಜು, ಮಹಾಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕನ್ನಮೇಡಿ ಕೃಷ್ಣಮೂರ್ತಿ, ಪೆದ್ದಣ್ಣ, ಸಿ.ಕೆ. ತಿಪ್ಪೇಸ್ವಾಮಿ, ರಾಮಕೃಷ್ಣ, ನರಸಿಂಹರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.