ಕೊರಟಗೆರೆ: ತಾಲ್ಲೂಕಿನ ಬೊಮ್ಮಲದೇವಿಪುರ ವ್ಯಾಪ್ತಿಯ ಚಿಕ್ಕಪಾಳ್ಯದಲ್ಲಿನ ಜಲಜೀವನ್ ಮಷಿನ್ ಕಾಮಗಾರಿಯನ್ನು ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದರು. ಗುತ್ತಿಗೆದಾರರಿಗೆ ಹೊಸದಾಗಿ ಕಾಮಗಾರಿ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಕಾಮಗಾರಿ ಕಳಪೆ ಹಾಗೂ ತರಾತುರಿಯಲ್ಲಿ ಕಾಮಗಾರಿ ಮಾಡಿ ಮುಗಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ‘ಜಲ ಜೀವನ್ ಮಷಿನ್ ಕಾಮಗಾರಿ ಕಳಪೆ: ಆರೋಪ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಗುರುವಾರ ಸುದ್ದಿ ಪ್ರಕಟವಾಗಿತ್ತು.
ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ. ಅನಂತರಾಮು ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೀರ್ತಿ ನಾಯಕ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿದರು.
ಕಾಮಗಾರಿ ತರಾತುರಿ ಹಾಗೂ ಕಳಪೆಯಿಂದ ಮಾಡಿರುವುದು ಧೃಢವಾಗಿದೆ. ಗುತ್ತಿಗೆದಾರ ಟೆಂಡರ್ ಬಳಿಕ ಇಲಾಖೆ ಗಮನಕ್ಕೆ ತರದೆ ಏಕಾಏಕಿ ಕಾಮಗಾರಿ ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ. ಇದು ಕಳಪೆಯಿಂದ ಕೂಡಿರುವ ಕಾರಣ ಪೈಪ್ಲೈನ್ ತೆಗೆದು ಮತ್ತೆ ಗುಣಮಟ್ಟದ ಪೈಪ್ ಅಳವಡಿಸುವಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ಸ್ಪಂದಿಸದಿದ್ದರೆ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.