ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಮಾಡಿರುವುದು ವಿಪರ್ಯಾಸ ಎಂದು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯದ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಬೇಸರ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಜಾತಿ, ಧರ್ಮ ಮೀರಿ ಬೆಳೆದ ನಾಯಕ. ವಿದ್ಯಾವಂತ ಸಮಾಜದಿಂದ ಮಾತ್ರ ಸಮಾಜ ಬದಲಾಗಲು ಸಾಧ್ಯ ಎಂದು ನಂಬಿದ್ದರು. ಸಮಾಜವನ್ನು ತಿದ್ದುವ ಉತ್ತಮ ಕಾರ್ಯ ಮಾಡಿದರು. ಪುರುಷರಿಗೆ ಸಮನಾಗಿ ಮಹಿಳೆಯರು ಎಲ್ಲ ಸ್ತರಗಳಲ್ಲೂ ಕಾರ್ಯನಿರ್ವಹಿಸಲು ಅಂಬೇಡ್ಕರ್ ಕಾರಣರಾಗಿದ್ದಾರೆ. ಹಲವು ಅಭಿವೃದ್ಧಿಗಳ ಹರಿಕಾರರು ಎಂದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್, ‘ಶೋಷಿತರ, ದಮನಿತರ ಧ್ವನಿಯಾದವರು ಅಂಬೇಡ್ಕರ್. ಅವರನ್ನು ಮರೆತ ಭಾರತ, ಭಾರತೀಯರಿಗೆ ಭವಿಷ್ಯವಿಲ್ಲ. ಸಂವಿಧಾನ ಪೂರ್ವ ಭಾರತದಲ್ಲಿ ಶೋಷಿತರ ಅಕ್ಷರಾಭ್ಯಾಸ ನಿಷೇಧಿಸಲಾಗಿತ್ತು. ಅಸಮಾನತೆ ತಾಂಡವವಾಡುತ್ತಿತ್ತು. ಅಂಬೇಡ್ಕರ್ ಅವರ ಸಂವಿಧಾನ ಇವೆಲ್ಲ ಅನ್ಯಾಯಗಳಿಗೂ ತೆರೆ ಎಳೆಯಿತು’ ಎಂದು ತಿಳಿಸಿದರು.
ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಅಂಬೇಡ್ಕರ್ ಅವರನ್ನು ಜಾತಿ, ಧರ್ಮಗಳಿಗೆ ಸೀಮಿತ ಮಾಡಿದವರು ಸಂಕುಚಿತರು. ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ವಸತಿ, ಊಟದ ಸೌಲಭ್ಯ ಕಲ್ಪಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ದಾರಿ ದೀಪವಾಗುತ್ತಿದೆ’ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಅಂಬೇಡ್ಕರ್ ಅಧ್ಯಯನ ಪೀಠದ ಸಂಯೋಜಕ ಪ್ರೊ.ಕೇಶವ, ಪ್ರೊ.ಬಿ.ರಮೇಶ್, ಪ್ರೊ.ಜಿ.ಬಸವರಾಜ, ಎ.ರೂಪೇಶ್ ಕುಮಾರ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.