ತುಮಕೂರು: ನಗರದ ವಿನಾಯಕ ನಗರದ ನಿವಾಸಿ ಟಿ.ಯು.ಭರತ್ (32) ಎಂಬುವರು ಗುರುವಾರ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭರತ್ ಹೆಗ್ಗೆರೆಯ ಇಂಡಿಯನ್ ಓವರ್ ಸಿಸ್ ಬ್ಯಾಂಕ್ನಲ್ಲಿ ಹಲವು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಮನೆಯವರು ತಾಲ್ಲೂಕಿನ ಹರಳೂರು ಜಾತ್ರೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನ್ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ವಾಪಸ್ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು
ಗೊತ್ತಾಗಿದೆ.
ಮೂವರ ವಿರುದ್ಧ ಪ್ರಕರಣ: ‘ವಿನಾಯಕ ನಗರದ ನಿವಾಸಿಗಳಾದ ಆನಂದಪ್ಪ, ಅವರ ತಂಗಿ ತ್ರಿವೇಣಿ, ಅವರ ಅಕ್ಕ– ಈ ಮೂವರು ನನ್ನ ಮಗನ ಸಾವಿಗೆ ಕಾರಣ’ ಎಂದು ಭರತ್ ತಂದೆ ಎಚ್.ಸಿ.ಉಮೇಶಣ್ಣ ನಗರ ಠಾಣೆಗೆ ದೂರು ನೀಡಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಆನಂದಪ್ಪ ಬೇರೆಯವರ ಹೆಸರಿನಲ್ಲಿ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದುಕೊಂಡು ಲಾರಿ ಖರೀದಿಸಿದ್ದರು. ಅದೇ ರೀತಿ ನನ್ನ ಮಗನ ಹೆಸರಿನಲ್ಲೂ ಲಾರಿ ಖರೀದಿಸಿದ್ದರು. ಆದರೆ ಸಾಲದ ಕಂತು ಕಟ್ಟುತ್ತಿರಲಿಲ್ಲ. ಹಣ ಕಟ್ಟುವಂತೆ ಫೈನಾನ್ಸ್ ಸಂಸ್ಥೆಯಿಂದ ನನ್ನ ಮಗನಿಗೆ ನೋಟಿಸ್ ಕಳುಹಿಸುತ್ತಿದ್ದರು. ನಂತರ ನಾವು ಆ ಲಾರಿಯನ್ನು ತಂದು ಗ್ಯಾರೇಜ್ನಲ್ಲಿ ಬಿಟ್ಟಿದ್ದೇವೆ. ಇದರ ಮಧ್ಯೆ ಲಾರಿ ಮಾರಾಟ ಮಾಡಲು ಸಹಿ ಹಾಕುವಂತೆ ನನ್ನ ಮಗನಿಗೆ ಆನಂದಪ್ಪ ಒತ್ತಾಯ ಮಾಡುತ್ತಿದ್ದರು. ಇದರಿಂದ ಮನನೊಂದು ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.