ತುಮಕೂರು: ಪಾವಗಡ ಸೌಹಾರ್ದ ಮಲ್ಟಿ ಪರ್ಪಸ್ ಕೋ–ಆಪರೇಟಿವ್ ಬ್ಯಾಂಕ್ನ ಎಸ್ಐಟಿ ಶಾಖೆಯಲ್ಲಿ ಯಾವುದೇ ಸಾಲ ಪಡೆಯದಿದ್ದರೂ ₹4.50 ಲಕ್ಷ ಸಾಲ ಪಡೆದಂತೆ ದಾಖಲೆ ಸೃಷ್ಟಿಸಿ ವಂಚಿಸಲಾಗಿದೆ ಎಂದು ಎನ್.ನಾರಾಯಣಪ್ಪ ಎಂಬುವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ನಗರದ ಗೋಕುಲ ಬಡಾವಣೆಯ ಬಿಎಸ್ಎನ್ಎಲ್ ನಿವೃತ್ತ ನೌಕರ ನಾರಾಯಣಪ್ಪ ನಿವೃತ್ತಿ ನಂತರ ಬಂದ ಹಣವನ್ನು ಬ್ಯಾಂಕ್ನಲ್ಲಿ ತಮ್ಮ ಮಗನ ಹೆಸರಿನಲ್ಲಿ ಠೇವಣಿ ಇಟ್ಟಿದ್ದರು. ಠೇವಣಿ ಮೇಲೆ ಬಡ್ಡಿ ದರ ಹೆಚ್ಚಾಗಿದ್ದು, ಬಾಂಡ್ನಲ್ಲಿ ನಮೂದಿಸುವುದಾಗಿ ಹೇಳಿ ಬ್ಯಾಂಕ್ ವ್ಯವಸ್ಥಾಪಕ ನಾಗಾರ್ಜುನ್ ನನ್ನಿಂದ ಬಾಂಡ್ ಪಡೆದುಕೊಂಡು ವಾಪಸ್ ನೀಡಿರಲಿಲ್ಲ. ಆದರೆ ಠೇವಣಿ ಹಣದ ಮೇಲೆ ₹4.50 ಲಕ್ಷ ಸಾಲ ಪಡೆದುಕೊಂಡಿರುವಂತೆ ದಾಖಲೆ ಸೃಷ್ಟಿಸಲಾಗಿದೆ. ಸಾಲ ಪಡೆಯದೇ ಇದ್ದರೂ ಸಾಲ, ಬಡ್ಡಿ ಸೇರಿ ₹4.85 ಲಕ್ಷ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪತ್ನಿ ಆರ್.ಪುಷ್ಪ ಅವರ ಹೆಸರಿನಲ್ಲಿ ₹7.50 ಲಕ್ಷ ಸಾಲ ಮಾಡಿದಂತೆ ದಾಖಲೆ ಸೃಷ್ಟಿಸಿ, ಅವರ ಹೆಸರಿನಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಳ್ಳಲಾಗಿದೆ ಎಂದು ದೂರು ನೀಡಿದ್ದಾರೆ.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ, ವ್ಯವಸ್ಥಾಪಕ ನಾಗಾರ್ಜುನ್, ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.