ತುಮಕೂರು: ಸಿಎಸ್ಆರ್ ನಿಧಿ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ನೆಲಹಾಳ್ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲಾಗುವುದು ಎಂದು ಶಾಸಕ ಬಿ.ಸುರೇಶ್ಗೌಡ ಭರವಸೆ ನೀಡಿದರು.
ತಾಲ್ಲೂಕಿನ ನೆಲಹಾಳ್ನಲ್ಲಿ ಈಚೆಗೆ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಎಲ್ಕೆಜಿಯಿಂದ ಪಿಯುಸಿ ತನಕ ಶಿಕ್ಷಣ ಪಡೆಯುವಂತೆ ಅಭಿವೃದ್ಧಿ ಪಡಿಸಲಾಗುವುದು. ಟಿ–ಮೇಕ್ ಕಂಪನಿಯು ಕಟ್ಟಡ ನಿರ್ಮಾಣಕ್ಕೆ ₹85 ಲಕ್ಷ ಅನುದಾನ ನೀಡಿದೆ ಎಂದು ತಿಳಿಸಿದರು.
ಮೂಲಭೂತ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳ ಬದುಕು ಬದಲಾಗುತ್ತದೆ. ಕಟ್ಟಡ ಸೇರಿದಂತೆ ಅನೇಕ ಕೊರತೆಗಳಿಂದ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ. ಅಗತ್ಯ ಸೌಲಭ್ಯ ಕಲ್ಪಿಸಿದರೆ ಮಕ್ಕಳು, ಪೋಷಕರು ಸರ್ಕಾರಿ ಶಾಲೆಗಳತ್ತ ಆಸಕ್ತಿ ತೋರುತ್ತಾರೆ. ಇದನ್ನು ಅರಿತು ಗ್ರಾಮಾಂತರ ಭಾಗದಲ್ಲಿ ಶಾಲೆಗಳ ಅಭಿವೃದ್ಧಿ ಶ್ರಮಿಸಲಾಗುತ್ತಿದೆ ಎಂದರು.
ಟಿ- ಮೇಕ್ ಕಂಪನಿಯ ವ್ಯವಸ್ಥಾಪಕ ಶಿವಕುಮಾರ್, ಗ್ರಾ.ಪಂ ಅಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ವೇದಾಶ್ರೀ, ಮುದ್ದಮ್ಮ, ಪಿ.ಬಿ.ಶಿವಣ್ಣ, ಮಂಜುನಾಥ್, ಗೌಡನಹಳ್ಳಿ ಶಿವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.