ADVERTISEMENT

ತುಮಕೂರು | ಲಂಚ: ಪಿಡಿಒಗೆ 3 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 3:08 IST
Last Updated 25 ಅಕ್ಟೋಬರ್ 2024, 3:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ನಾಗರಾಜ್‌ಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶಿಸಿದೆ.

2021 ಸೆಪ್ಟೆಂಬರ್ 8ರಂದು ಹೊಯ್ಸಳಕಟ್ಟೆ ಗ್ರಾಮದ ಎಚ್.ಇ.ಮಧು ಎಂಬುವರಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ₹2,150 ಲಂಚ ತೆಗೆದುಕೊಳ್ಳುವಾಗ ಎಸಿಬಿ ಪೊಲೀಸರು ನಾಗರಾಜ್‌ನನ್ನು ಬಂಧಿಸಿದ್ದರು.

ತಮ್ಮ ತಾಯಿ ಮಲ್ಲಮ್ಮ ಹೆಸರಿನಲ್ಲಿದ್ದ ನಿವೇಶನಕ್ಕೆ ಇ-ಸ್ವತ್ತು ಮಾಡಿಕೊಡುವಂತೆ ಕೋರಿ ಗ್ರಾ.ಪಂಗೆ ಮಧು ಅರ್ಜಿ ಸಲ್ಲಿಸಿದರು. ಇ–ಸ್ವತ್ತು ಮಾಡಿಕೊಡಲು ಲಂಚಕ್ಕೆ ಒತ್ತಾಯಿಸಿದರು. ಲಂಚ ಕೊಡದೆ ಎಸಿಬಿಗೆ ದೂರು ನೀಡಿದ್ದರು. ಇನ್‌ಸ್ಪೆಕ್ಟರ್ ಎಸ್.ವಿಜಯಲಕ್ಷ್ಮಿ ನೇತೃತ್ವದ ತಂಡ ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ನಾಗರಾಜ್‌ನನ್ನು ಬಂಧಿಸಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ಆರೋಪ ಸಾಬೀತಾಗಿದ್ದರಿಂದ 3 ವರ್ಷ ಶಿಕ್ಷೆ, ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಲೋಕಾಯುಕ್ತರ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ಪಿ.ಪ್ರಕಾಶ್ ವಾದ ಮಂಡಿಸಿದ್ದರು.

ನರೇಗಾ ಕೂಲಿ ಹಣ, ಸಾಮಗ್ರಿ ವೆಚ್ಚ ಬಿಡುಗಡೆ ಮಾಡಲು ₹1 ಸಾವಿರ ಲಂಚ ಪಡೆದಿದ್ದ ಶಿರಾ ತಾಲ್ಲೂಕಿನ ರಾಮಲಿಂಗಾಪುರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಓಂಕಾರಪ್ಪಗೆ ಇತ್ತೀಚೆಗಷ್ಟೇ ಇದೇ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.