ADVERTISEMENT

ತಾಳಿ ಕಟ್ಟುವಾಗ ಮದುವೆ ನಿರಾಕರಿಸಿದ ಯುವತಿ: ಪ್ರಿಯಕರನೊಂದಿಗೆ ಕಳಿಸಿಕೊಟ್ಟ ಪೋಷಕರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 14:04 IST
Last Updated 27 ಆಗಸ್ಟ್ 2023, 14:04 IST
ಮದುವೆ
ಮದುವೆ   ಪ್ರಾತಿನಿಧಿಕ ಚಿತ್ರ

ಕೊರಟಗೆರೆ : ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಭಾನುವಾರ ತಾಳಿ ಕಟ್ಟುವ ಸಮಯದಲ್ಲಿ ಮದುವೆ ನಿರಾಕರಿಸಿದ ವಧು, ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಹೇಳಿ ಹಸಮಣೆಯಿಂದ ಎದ್ದು ಹೋಗಿದ್ದಾಳೆ.  

ದೊಡ್ಡಬಳ್ಳಾಪುರದ ತಾಲ್ಲೂಕಿನ ಮೂಡ್ಲಕಾಳೇನಹಳ್ಳಿಯ ವೆಂಕಟೇಶ್‌ ಮತ್ತು ನೆಲಮಂಗಲ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ದಿವ್ಯಾ ಅವರ ಮದುವೆ ಭಾನುವಾರ ಕೋಳಾಲ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು.  

ಮುಹೂರ್ತದ ಸಮಯದಲ್ಲಿ ಏಕಾಏಕಿ ಹಸೆಮಣೆಯಿಂದ ಮೇಲೆದ್ದ ದಿವ್ಯಾ, ‘ನಾನು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ಕಲ್ಯಾಣ ಮಂಪಟದಿಂದ ಹೊರ ನಡೆದರು. 

ADVERTISEMENT

ಶನಿವಾರ ರಾತ್ರಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ನಗುತ್ತಲೇ ಪಾಲ್ಗೊಂಡಿದ್ದ ದಿವ್ಯಾ, ಎಲ್ಲರ ಜತೆ ಫೋಟೊ ತೆಗೆಸಿಕೊಂಡಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ಮದುವೆ ಶಾಸ್ತ್ರಗಳು ಸಹ ಸರಾಗವಾಗಿ ನಡೆದಿದ್ದು, ಆಗಲೂ ಸುಮ್ಮನಿದ್ದರು. 

ತಾಳಿ ಕಟ್ಟುವ ಸಮಯದಲ್ಲಿ ಮದುವೆಗೆ ದಿವ್ಯಾ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ದಾರಿ ತೋಚದಂತಾದ ವರನ ಪೋಷಕರು ಮತ್ತು ಸಂಬಂಧಿಗಳು ಕಲ್ಯಾಣ ಮಂಟಪದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಕೊಡಿಸುವಂತೆ ಕೋಳಾಲ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.

ಪೊಲೀಸರ ಸಮ್ಮುಖದಲ್ಲಿ ಎರಡು ಕುಟುಂಬಗಳ ಸಂಧಾನ ನಡೆಯಿತು. ಮದುವೆಯ ಖರ್ಚು ಭರಿಸುವುದಾಗಿ ವಧುವಿನ ಕುಟುಂಬಸ್ಥರು ಒಪ್ಪಿಕೊಂಡರು. ಈ ಎಲ್ಲ ಗೊಂದಲ ಮುಗಿದ ನಂತರ ಪೋಷಕರು, ದಿವ್ಯಾ ಇಷ್ಟಪಟ್ಟ ಯುವಕನ ಜೊತೆಗೆ ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.