ADVERTISEMENT

ಶಿರಾ: ಕೆಸರು ಗದ್ದೆಯಾದ ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 6:51 IST
Last Updated 24 ಜುಲೈ 2024, 6:51 IST
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆ ಕೆಸರು ಗದ್ದೆಯಾಗಿದೆ
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆ ಕೆಸರು ಗದ್ದೆಯಾಗಿದೆ   

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಾಗುತ್ತಿದ್ದು, ಸಂಪೂರ್ಣವಾಗಿ ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬುಕ್ಕಾಪಟ್ಟಣದಿಂದ ಹಾಗಲವಾಡಿ, ಹೊಸಕೆರೆ, ಚೇಳೂರು ಮಾರ್ಗದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬುಕ್ಕಾಪಟ್ಟಣ ಹೋಬಳಿಯಲ್ಲಿ ಸಂಪೂರ್ಣ ಹದಗೆಟ್ಟಿದೆ.

ಮಳೆ ಬಂದರೆ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಯಾವುದು ಗುಂಡಿ, ಯಾವುದು ರಸ್ತೆ ಎನ್ನುವುದು ತಿಳಿಯದೆ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಪರದಾಡುವಂತಾಗಿದೆ.

ADVERTISEMENT

ಬುಕ್ಕಾಪಟ್ಟಣ ಹೋಬಳಿ ಶಿರಾ ತಾಲ್ಲೂಕಿಗೆ ಸೇರಿದ್ದರೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಆದ್ದರಿಂದ ಎರಡು ಕ್ಷೇತ್ರದ ಶಾಸಕರು ಈ ಹೋಬಳಿಯನ್ನು ಮೂಲೆಗುಂಪು ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ರಸ್ತೆ ಹಾದು ಹೋಗುತ್ತಿದ್ದು ಮೂರು ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಚೆನ್ನಾಗಿಯೇ ಇದೆ. ಆದರೆ ಬುಕ್ಕಾಪಟ್ಟಣ ಹೋಬಳಿಗೆ ಕಾಲಿಟ್ಟ ತಕ್ಷಣ ಸುಮಾರು 7 ಕಿ.ಮೀ ರಸ್ತೆ ಅಭಿವೃದ್ಧಿ ಕಂಡಿಲ್ಲ. ರಸ್ತೆ ಕಿರಿದಾಗಿದ್ದು, ಗುಂಡಿಗಳಿಂದ ಕೂಡಿದೆ. ಜನಪ್ರತಿನಿಧಿಗಳು ಹಾಗೂ ಶಾಸಕರು ಈ ಬಗ್ಗೆ ನಿಗಾವಹಿಸಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್.ಮಂಜುನಾಥ್ ಪ್ರತಿಕ್ರಿಯಿಸಿ, ಮಾಜಿ ಶಾಸಕ ಜೆ‌.ಸಿ.ಮಾಧುಸ್ವಾಮಿ ಅವರು ಸಚಿವರಾಗಿದ್ದಾಗ ಗುಬ್ಬಿ ತಾಲ್ಲೂಕು ಗಡಿಯಿಂದ ಬುಕ್ಕಾಪಟ್ಟಣದ ರಾಷ್ಟ್ರೀಯ ಹೆದ್ದಾರಿ– 234 ಮತ್ತು ಬುಕ್ಕಾಪಟ್ಟಣದಿಂದ ಗಾಣದ ಹುಣಸೆ- ತಾವರೆಕೆರೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ-48ಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಜಿಲ್ಲಾ ಪ್ರಮುಖ ರಸ್ತೆಯಿಂದ ರಾಜ್ಯ ಹೆದ್ದಾರಿಯಾಗಿ ಮಾರ್ಪಡಿಸಿ ಅಭಿವೃದ್ಧಿಪಡಿಸುವ ಬಗ್ಗೆ ಕ್ರಿಯಾಯೋಜನೆ ತಯಾರಾಗಿತ್ತು. ₹24 ಕೋಟಿ ವೆಚ್ಚದ ದ್ವಿಪಥ ನಿರ್ಮಾಣಕ್ಕೆ ತಾಂತ್ರಿಕ ವರದಿ ಸಿದ್ಧಪಡಿಸಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಶಾಸಕರು ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.