ತುಮಕೂರು: ಶಂಕರಾಚಾರ್ಯರು ಆಧ್ಯಾತ್ಮಿಕ, ಬೌದ್ಧಿಕ ಚಿಂತನೆ ಮೂಲಕ ಜನರಲ್ಲಿ ರಾಷ್ಟ್ರೀಯತೆಯ ಜಾಗೃತಿ ಮೂಡಿಸಿದ್ದರು. ಅವರೊಬ್ಬ ಶ್ರೇಷ್ಠ ಸಮಾಜ ಚಿಂತಕರು ಎಂದು ಶೃಂಗೇರಿ ಶಂಕರ ಮಠದ ಶಂಕರ ತತ್ವ ಪ್ರಚಾರ ಸಂಯೋಜಕ ಎಂ.ಕೆ.ನಾಗರಾಜರಾವ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬ್ರಾಹ್ಮಣ ಸಭಾ, ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜರು, ವಿದ್ವಾಂಸರು, ಜನ ಸಾಮಾನ್ಯರನ್ನು ಭೇಟಿಯಾಗಿ ಅವರಿಗೆ ಮಾರ್ಗದರ್ಶನ ಮಾಡಿ ಸಮಾಜ ಸುಧಾರಣೆಗೆ ನೆರವಾದರು. ಎಲ್ಲಾ ವರ್ಗದವರಿಗೂ ತಮ್ಮ ತತ್ವಾದರ್ಶಗಳು ತಲುಪಿಸಲು ಶ್ರಮಿಸಿದರು. ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಅದನ್ನು ಎಲ್ಲರಿಗೂ ಮುಟ್ಟಿಸುವ ಪ್ರಯತ್ನ ಮಾಡಿದರು. ನಮ್ಮ ರಾಷ್ಟ್ರೀಯತೆ, ಗುರು ಪರಂಪರೆಯ ಮೌಲ್ಯಗಳನ್ನು ಸಾರಿ ಹೇಳಿದರು. ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ದುಡಿದರು ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಶಂಕರಾಚಾರ್ಯರು ಮನುಕುಲದ ಒಳಿತಿಗಾಗಿ ತಮ್ಮ ಬದುಕು ಮೀಸಲಿಟ್ಟಿದ್ದರು. ಶಾಂತಿ, ಸೌಹಾರ್ದಯುತ ಸಮಾಜ ನಿರ್ಮಾಣದ ಆಶಯ ಹೊಂದಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಮಾದರಿ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.
ಎಲ್ಲೆಡೆ ಸಂಚಾರ ಮಾಡಿ ಸಮಾಜದ ಲೋಪದೋಷ ತಿದ್ದಿದರು. ಮಾನವ ಕಲ್ಯಾಣಕ್ಕಾಗಿ ತಮ್ಮ ತತ್ವ ಸಂದೇಶಗಳನ್ನು ಪ್ರಚಾರ ಮಾಡಿದರು. ಇವರ ಆದರ್ಶಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಹೊಳ್ಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ವಕೀಲ ಜಿ.ಎಸ್.ನಾರಾಯಣ್, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಎಚ್.ಕೆ.ರಮೇಶ್, ಕಂದಾಯ ಇಲಾಖೆ ಸಹಾಯಕ ಆಯುಕ್ತ ಅನಂತರಾಮು, ಸಮುದಾಯದ ಮುಖಂಡರಾದ ಎಚ್.ಎಸ್.ನಾಗಭೂಷಣ್, ಎಚ್.ಎಸ್.ರಾಘವೇಂದ್ರ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.