ತುಮಕೂರು (ತೋವಿನಕೆರೆ): ಬಿಸಾಡಿಹಳ್ಳಿ ಗೊಲ್ಲರಹಟ್ಟಿ ಕೃಷ್ಣ ಕುಟೀರದಲ್ಲಿದ್ದ ಮೂವರು ಬಾಣಂತಿಯರು ಹಾಗೂ ಶಿಶುಗಳನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮತ್ತೆ ಮನೆಗೆ ಸೇರಿಸಿದರು. ಎರಡು ಕೃಷ್ಣ ಕುಟೀರಗಳಿಗೆ ಅವರೇ ಬೀಗ ಹಾಕಿದರು.
ಗೊಲ್ಲರಹಟ್ಟಿಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಜನರ ಜತೆ ಚರ್ಚಿಸಿದರು. ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಇನ್ನು ಮುಂದೆ ಮೌಢ್ಯಾಚರಣೆ ಮುಂದುವರಿಸಬಾರದು ಎಂದು ಕಿವಿಮಾತು ಹೇಳಿದರು.
ಹಲವು ದಿನಗಳಿಂದ ಕೃಷ್ಣ ಕುಟೀರದಲ್ಲಿ ವಾಸವಿದ್ದ ಬಾಣಂತಿಯರನ್ನು ಅವರ ಕುಟುಂಬಸ್ಥರ ಮನವೊಲಿಸಿ ಮನೆಗೆ ಕಳುಹಿಸಿದರು. ಮಗುವನ್ನು ತಾವೇ ಎತ್ತಿಕೊಂಡು ಹೋಗಿ ಮನೆ ಒಳಗೆ ಬಿಟ್ಟರು. ಇದೇ ಸಮಯದಲ್ಲಿ ಒಂದು ಮಗುವಿಗೆ ‘ನಾಗಲಕ್ಷ್ಮಿ’ಎಂದು ನಾಮಕರಣ ಮಾಡಲಾಯಿತು.
‘ಕುಟೀರಗಳನ್ನು ಮುಂದಿನ 6 ತಿಂಗಳಲ್ಲಿ ಗ್ರಂಥಾಲಯ ಮತ್ತು ಅಂಗನವಾಡಿ ಕೇಂದ್ರವಾಗಿ ಮಾರ್ಪಡಿಸಬೇಕು. ಮಕ್ಕಳಿಗೆ ಶಿಕ್ಷಣ ನೀಡಿ, ವಿದ್ಯಾವಂತರನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗೊಲ್ಲರಹಟ್ಟಿ ಕುಟೀರಗಳಲ್ಲಿ ಬಾಣಂತಿ, ಮಕ್ಕಳನ್ನು ಬಿಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.