ತುಮಕೂರು: ಬೇಸಿಗೆ ರಜೆ ಮುಗಿಸಿದ ಮಕ್ಕಳು ಶುಕ್ರವಾರ ಶಾಲೆಗಳತ್ತ ಹೆಜ್ಜೆ ಹಾಕಿದರು. ಹಬ್ಬದ ರೀತಿಯಲ್ಲಿ ಶಾಲೆಗಳನ್ನು ಅಲಂಕರಿಸಿದ್ದ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮಕ್ಕಳನ್ನು ಬರಮಾಡಿಕೊಂಡರು.
ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಲಾಯಿತು. ಆರಂಭದ ಮೊದಲ ದಿನವೇ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಮಧ್ಯಾಹ್ನದ ಬಿಸಿಯೂಟದಲ್ಲಿ ವಿಶೇಷವಾಗಿ ಸಿಹಿಯೂಟ ಬಡಿಸಲಾಯಿತು.
ಪ್ರಾರಂಭದ ಮೊದಲ ದಿನ ಪಾಠಕ್ಕಿಂತ ಇತರೆ ಚಟುವಟಿಕೆಗಳು ನಡೆದವು. ಮಕ್ಕಳು ತಮ್ಮ ಸ್ನೇಹಿತರೊಟ್ಟಿಗೆ ಬೆರೆತು ಹಾಡಿ, ಕುಣಿದು ನಲಿದರು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.
ಕಳೆದ ಎರಡು ದಿನಗಳಿಂದ ಶಾಲೆಗಳಲ್ಲಿ ಸಿದ್ಧತೆ ಆರಂಭಿಸಲಾಗಿತ್ತು. ಶಾಲಾ ಕೊಠಡಿ, ಆಟದ ಮೈದಾನ, ಶೌಚಾಲಯ, ಬಿಸಿಯೂಟ ತಯಾರಿಸುವ ಪಾತ್ರೆ ಪರಿಕರಗಳ ಸ್ವಚ್ಛತೆ ಮಾಡಿಕೊಳ್ಳಲಾಗಿತ್ತು. ಮಕ್ಕಳು ಸಹ ಖುಷಿಯಿಂದಲೇ ಶಾಲೆಗಳಿಗೆ ಬಂದು ಅಕ್ಷರ ಕಲಿಕೆಯಲ್ಲಿ ತೊಡಗಿಸಿಕೊಂಡರು. ರಜೆ ಮುಗಿಸಿ ಬಂದಿದ್ದ ಶಿಕ್ಷಕರ ಮೊಗದಲ್ಲೂ ನಗೆ ಮೂಡಿತು.
ಜೂನ್ ಮೊದಲ ವಾರ ದಾಖಲಾತಿ ಆಂದೋಲನ ನಡೆಯಲಿದೆ. ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವುದು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಕರೆತರುವುದು, ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಾಥಾ ನಡೆಸಿ ಮನೆಗಳಿಗೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆ ತರುವ ಪ್ರಯತ್ನ ಮಾಡಲಾಗುತ್ತದೆ.
ನಗರದ ಸಿರಾ ಗೇಟ್ ಸಮೀಪದ ಉತ್ತರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿದ್ದರು. ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.