ತುಮಕೂರು: ಕರ್ನಾಟಕ ಲೋಕಸೇವಾ ಆಯೋಗ, ಪರೀಕ್ಷಾ ಪ್ರಾಧಿಕಾರದಿಂದ ನಡೆಯುವ ಪರೀಕ್ಷೆ ಕುರಿತು ಮಾಹಿತಿ ನೀಡುವ, ಅಭ್ಯರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಹಾಲಪ್ಪ ಪ್ರತಿಷ್ಠಾನದಿಂದ ನಗರದಲ್ಲಿ ಬುಧವಾರ ‘ಆತ್ಮವಿಶ್ವಾಸ್’ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
‘ಯುಪಿಎಸ್ಸಿ ಪರೀಕ್ಷೆ ರೀತಿ ಕೆಪಿಎಸ್ಸಿ ಪರೀಕ್ಷೆ ನಡೆಯಬೇಕು. ಕೇಂದ್ರ ಸರ್ಕಾರದ ರೈಲ್ವೆ, ಎಸ್ಎಸ್ಸಿ ಇತರೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು. ಈಗಾಗಲೇ ಪರೀಕ್ಷೆ ಎದುರಿಸಿ, ಆಯ್ಕೆಯಾದ ಅಧಿಕಾರಿಗಳಿಂದ ಸಂವಾದ ಏರ್ಪಡಿಸಲಾಗುವುದು. ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲಾಗುವುದು’ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್ ಹಾಲಪ್ಪ ಹೇಳಿದರು.
ಯುಪಿಎಸ್ಸಿ ಪ್ರಥಮ ಹಂತದ ಪರೀಕ್ಷೆ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಜಿಲ್ಲೆಯ 12 ಜನ ಅಭ್ಯರ್ಥಿಗಳಿಗೆ ಊಟ ತಿಂಡಿಯ ಜತೆಗೆ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಸಮಾನ ಮನಸ್ಕ ಗೆಳೆಯರು ಸೇರಿ ದೆಹಲಿಯ ಐಎಎಸ್ ತರಬೇತಿ ಸಂಸ್ಥೆಯ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅಗತ್ಯ ಇರುವವರು ಸಂಪರ್ಕಿಸಬಹುದು ಎಂದರು.
ನವೋದಯ ಐಎಎಸ್ ಅಕಾಡೆಮಿ ಗೌರವಾಧ್ಯಕ್ಷ ನಾಗರಾಜರಾವ್, ಸಂಪನ್ಮೂಲ ವ್ಯಕ್ತಿ ಭಾಸ್ಕರ್, ಕೃಷ್ಣ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ಮರಿಚನ್ನಮ್ಮ, ಮುಖಂಡರಾದ ರೇವಣ್ಣಸಿದ್ದಯ್ಯ, ಎಂ.ವಿ.ಬಸವರಾಜು, ಟಿ.ಎಸ್.ನಿರಂಜನ್, ದೀಪ್ತಿ ರಾಜೇಶ್, ತ್ರಿವೇಣಿ, ವಿಭೂಷಣ್, ಪೃಥ್ವಿ ಹಾಲಪ್ಪ, ಸಂಜೀವ್, ಶಿವಕುಮಾರ್, ನಟರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.