ತುಮಕೂರು: ನಗರದ ವಿಜಯನಗರ ಪ್ರದೇಶದ ಮನೆಗಳಿಗೆ ಕಳೆದ ಎರಡು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಸಂಪ್ಗಳಿಗಲ್ಲಿ ಕಲುಷಿತ ನೀರು ತುಂಬಿಕೊಂಡಿದೆ.
ಸಂಪ್ಗಳಲ್ಲಿ ಚರಂಡಿ ನೀರು ಸಂಗ್ರಹವಾಗಿದ್ದನ್ನು ಕಂಡ ವಿಜಯನಗರದ ನಿವಾಸಿಗಳು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ ಡೆಂಗಿ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಸ್ವಚ್ಛತೆ, ಶುದ್ಧ ನೀರು ಪೂರೈಕೆಗೆ ಆದ್ಯತೆ ನೀಡಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶದ ಮಾತುಗಳನ್ನಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೋಮವಾರ ವಿಜಯನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
20 ಮನೆಗಳಿಗೆ ಚರಂಡಿ ನೀರು ಹರಿದಿದೆ. ಒಳ ಚರಂಡಿ ಪೈಪ್ಲೈನ್ ಒಡೆದು ಹೋಗಿ ನೀರು ಹರಿದಿರಬಹುದು. ಅಧಿಕಾರಿಗಳು ಇಷ್ಟು ನಿರ್ಲಕ್ಷ್ಯ ವಹಿಸಿದರೆ ಹೇಗೆ? ಒಳ ಚರಂಡಿ ಸರಿಪಡಿಸಲು ಇನ್ನು ಎಷ್ಟು ದಿನ ಸಮಯ ಬೇಕು? ತಮ್ಮ ಮನೆಗಳಿಗೆ ಕಲುಷಿತ ನೀರು ಕೊಟ್ಟರೆ ಅಧಿಕಾರಿಗಳು ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು.
ಒಳ ಚರಂಡಿ ಮಾರ್ಗ ಸುಸ್ಥಿತಿಯಲ್ಲಿ ಇದ್ದರೂ ಸಂಪ್ಗಳಿಗೆ ಕೊಳಚೆ ನೀರು ಹೇಗೆ ಹರಿಯುತ್ತಿದೆ. ಸಂಪ್ಗಳು ಶಿಥಿಲಗೊಂಡಿದ್ದರೆ ದುರಸ್ತಿಗೊಳಿಸಲು ಮನೆಯವರಿಗೆ ತಿಳಿಸಬೇಕು ಎಂದು ಸ್ಥಳದಲ್ಲಿದ್ದ ಪಾಲಿಕೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಮುಖಂಡ ವಿಷ್ಣುವರ್ಧನ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.