ADVERTISEMENT

ಗುಬ್ಬಿ | ಕೊಬ್ಬರಿ ನೊಂದಣಿ: ಸರ್ವರ್ ಸಮಸ್ಯೆಗೆ ಬೇಸತ್ತ ರೈತರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 4:27 IST
Last Updated 5 ಮಾರ್ಚ್ 2024, 4:27 IST
<div class="paragraphs"><p>ಗುಬ್ಬಿಯ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ನೊಂದಣಿಗೆ ಕಾಯುತ್ತಿದ್ದ ರೈತರು</p></div>

ಗುಬ್ಬಿಯ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ನೊಂದಣಿಗೆ ಕಾಯುತ್ತಿದ್ದ ರೈತರು

   

ಗುಬ್ಬಿ: ಸೋಮವಾರದಿಂದ ಪಟ್ಟಣದ ಎಪಿಎಂಸಿ ಹಾಗೂ ಚೇಳೂರು ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿಗೆ ನೋಂದಣಿ ಕಾರ್ಯ ಪ್ರಾರಂಭವಾಯಿತು. ಕಳೆದ ಬಾರಿ ಕೇವಲ 3 ದಿನಕ್ಕೆ ನೋಂದಣಿ ನಿಲ್ಲಿಸಿದ್ದರಿಂದ, ಈ ಬಾರಿ ರೈತರು ಮಧ್ಯರಾತ್ರಿಯೇ ಖರೀದಿ ಕೇಂದ್ರದ ಬಳಿ ಜಮಾಯಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಅಗತ್ಯ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಾರಂಭದಲ್ಲಿ ಸರ್ವರ್ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತ್ತು. ನೋಂದಣಿ ಸ್ಥಳದಲ್ಲಿ ಕನಿಷ್ಠ ಕುಡಿಯುವ ನೀರಿನ ಸೌಕರ್ಯವನ್ನು ಒದಗಿಸದ ಅಧಿಕಾರಿಗಳ ವಿರುದ್ಧ ರೈತರು ಬೇಸರ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.

ಸಾವಿರಾರು ರೈತರು, ಮಹಿಳೆಯರು, ಹಿರಿಯ ನಾಗರಿಕರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರೂ ಅಧಿಕಾರಿಗಳು ಕನಿಷ್ಠ ಸೌಜನ್ಯವನ್ನು ತೋರುತ್ತಿಲ್ಲ. ಅಗತ್ಯವಿರುವ ತಯಾರಿಯನ್ನೂ ಮಾಡಿಕೊಂಡಿಲ್ಲ. ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತ ಕೆಂಪಣ್ಣ ಬೇಸರ ವ್ಯಕ್ತಪಡಿಸಿದರು.

ಸುಮಾರು 20 ಕಿ.ಮೀ ದೂರದಿಂದ ಬೆಳಿಗ್ಗೆ ಬಂದು ಕಾಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ನೊಂದಣಿ ಕಾರ್ಯ ಆಸ್ತವ್ಯಸ್ತವಾಗುತ್ತಿದೆ ರೈತ ಮಹಿಳೆ ಜಯಮ್ಮ ಬೇಸರ ವ್ಯಕ್ತಪಡಿಸಿದರು.

ಮಧ್ಯಾಹ್ನದ ವೇಳೆ ಸಮಸ್ಯೆಯನ್ನು ಅರಿತ ಅಧಿಕಾರಿಗಳು ಆಧಾರ್ ಕಾರ್ಡ್ ಹೊಂದಿದ್ದ ಸುಮಾರು 1,200 ರೈತರಿಗೆ ನೋಂದಣಿ ಕೂಪನ್ ನೀಡಿ ನಂತರ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಮೊದಲ ದಿನವಾಗಿದ್ದರಿಂದ ನೋಂದಣಿಗೆ ಪ್ರಾರಂಭದಲ್ಲಿ ಸ್ವಲ್ಪ ಅಡೆತಡೆ ಉಂಟಾಗಿತ್ತು. ನಾಳೆಯಿಂದ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮ  ತೆಗೆದುಕೊಂಡಿದ್ದೇವೆ ಎಂದು ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.