ಪಾವಗಡ: ಪಟ್ಟಣದ ಅಂಚೆ ಕಚೇರಿ ಬಳಿ ಕಟ್ಟಣ ನಿರ್ಮಾಣದಿಂದ ಐತಿಹಾಸಿಕ ಕೋಟೆ ಗೋಡೆ ಕುಸಿದಿರುವುದನ್ನು ವಿರೋಧಿಸಿ ತಹಶೀಲ್ದಾರ್ ಕಚೇರಿ ಮುಂಭಾಗ ಶನಿವಾರವು ಧರಣಿ ಮುಂದುವರೆಯಿತು.
ಯಾವುದೇ ಪರವಾನಗಿ ಪಡೆಯದೆ 10ರಿಂದ 12 ಅಡಿ ಆಳ ತೆಗೆದು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಲಾಗಿದೆ. ಇಲಾಖೆಗಳ ಅನುಮತಿ ಪಡೆಯದೆ ಕೋಟೆಗೆ ಹೊಂದಿಕೊಂಡು ಕೊಳವೆ ಬಾವಿ ಕೊರೆಸಲಾಗಿದೆ. ಇದರಿಂದ ಕೋಟೆ ಗೋಡೆ ಕುಸಿದಿದೆ ಎಂದು ಧರಣಿ ನಿರತರು ಆರೋಪಿಸಿದರು.
ಕೋಟೆ ಗೋಡೆಯ ಕಲ್ಲುಗಳನ್ನು ರಾತ್ರೋರಾತ್ರಿ ಯಂತ್ರಗಳನ್ನು ಬಳಸಿ ಪುಡಿ ಮಾಡಿ ಸ್ಮಾರಕಗಳಿಗೆ ಸೇರಿದ ಸ್ವತ್ತನ್ನು ನಾಶಪಡಿಸಲಾಗಿದೆ. ಇಷ್ಟಾದರೂ ಪುರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದು ಅನುಮಾನಕ್ಕೆ ಎಡೆಮಾಡುತ್ತಿದೆ ಎಂದು ದೂರಿದರು.
ಐತಿಹಾಸಿಕ ಕೋಟೆಗೆ ಹಾನಿ ಮಾಡಿರುವವರ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್ ಧರಣಿ ಸ್ಥಳಕ್ಕೆ ಬಂದು, ಕಟ್ಟಡ ಮಾಲೀಕರಿಗೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಕಟ್ಟಡ ಪರವಾನಗಿ ರದ್ದು ಮಾಡಲಾಗಿದೆ. ಕಾಮಗಾರಿ ಮುಂದುವರೆಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್ ನೀಡಲಾಗಿದೆ ಎಂದು ಧರಣಿ ನಿರತರಿಗೆ ನೋಟಿಸ್ ಪ್ರತಿ ನೀಡಿದರು.
ನೋಟಿಸ್ ಪ್ರತಿ ಸ್ವೀಕರಿಸಿದ ನಂತರ ಧರಣಿಯನ್ನು ಸ್ಥಗಿತಗೊಳಿಸಲಾಯಿತು.
ವಾಲ್ಮೀಕಿ ಜಾಗೃತಿ ವೇದಿಕೆ ಸಂಚಾಲಕ ಬೇಕರಿ ನಾಗರಾಜು, ಕನ್ನಮೇಡಿ ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.