ADVERTISEMENT

ತುಮಕೂರು | ಕೊಲೆ ಬೆದರಿಕೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 14:15 IST
Last Updated 6 ಜೂನ್ 2024, 14:15 IST

ತುಮಕೂರು: ಕೊಲೆ ಬೆದರಿಕೆ ಹಾಕಿ, ₹40 ಸಾವಿರ ಹಣ ಕಿತ್ತುಕೊಂಡ ಆರೋಪದ ಮೇರೆಗೆ ನಗರದ ನವೀನ್, ಉದ್ಯಮಿ ಮಂಜುನಾಥ್ ರೆಡ್ಡಿ ಮತ್ತು ಇತರರ ವಿರುದ್ಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'₹1.90 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕಿ ₹40 ಸಾವಿರ ಪಡೆದಿದ್ದಾರೆ' ಎಂದು ನಗರದ ಬನಶಂಕರಿ ನಿವಾಸಿ, 'ಧವಳ ಡೇರಿ ಗ್ರೂಪ್ಸ್' ಮಾಲೀಕ ಡಿ.ಮೇಘರಾಜು ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

'ಮಂಜುನಾಥ ರೆಡ್ಡಿ ಅವರ ಎಪಿಎಂಸಿ ಮಾರುಕಟ್ಟೆಯ ಮಾರುತಿ ಎಂಟರ್ ಪ್ರೈಸಸ್ ಮಳಿಗೆಯಿಂದ ನಮ್ಮ ಅಂಗಡಿಗೆ ಅಮುಲ್ ತುಪ್ಪ, ಐಸ್ ಕ್ರೀಮ್ ಸೇರಿದಂತೆ ಇತರೆ ಪದಾರ್ಥ ಖರೀದಿಸಲಾಗಿತ್ತು. ಇದರಲ್ಲಿ ₹50 ಸಾವಿರ ಬೆಲೆ ಬಾಳುವ ಪದಾರ್ಥಗಳ ಬಳಕೆಯ ದಿನಾಂಕ ಮುಗಿಯುವ ಹಂತಕ್ಕೆ ತಲುಪಿತ್ತು. ಈ ಪದಾರ್ಥ ವಾಪಸ್ ಪಡೆಯುವುದಾಗಿ ಮಾರುತಿ ಎಂಟರ್ ಪ್ರೈಸಸ್ ಮಾಲೀಕರು ಖರೀದಿ ಸಮಯದಲ್ಲಿ ತಿಳಿಸಿದ್ದರು. ದಿನಾಂಕ ಮುಗಿದ ನಂತರ ಅವರಿಗೆ ತಿಳಿಸಿದರೆ ವಾಪಸ್ ತೆಗೆದುಕೊಂಡು ಹೋಗಲಿಲ್ಲ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ನಂತರ ಯಾವುದೇ ಪದಾರ್ಥ ವಾಪಸ್ ಪಡೆಯುವುದಿಲ್ಲ, ಎಲ್ಲ ಪದಾರ್ಥಗಳಿಗೆ ₹1.90 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು. ಹಣ ಕೊಡದಿದ್ದಾಗ ನನ್ನನ್ನು ಬಲವಂತವಾಗಿ ಎಪಿಎಂಸಿ ಯಾರ್ಡ್‌ಗೆ ಕರೆದುಕೊಂಡು ಹೋಗಿ ಗೋದಾಮಿನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ₹40 ಸಾವಿರ ಕಿತ್ತುಕೊಂಡು, ಇನ್ನೂ ₹1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

'ಪೊಲೀಸರಿಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಆದ್ದರಿಂದ ತಡವಾಗಿ ಬಂದು ದೂರು ನೀಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.