ತುಮಕೂರು: ಹಾಲಿನ ಪ್ರೋತ್ಸಾಹ ಧನವನ್ನು ಲೀಟರ್ಗೆ ₹5ರಿಂದ ₹10ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
‘ಹೈನುಗಾರಿಕೆ ರಾಜ್ಯದ ಬಹುತೇಕ ರೈತಾಪಿ ಕುಟುಂಬಗಳ ಆರ್ಥಿಕ ಮೂಲವಾಗಿದೆ. ಕೆಎಂಎಫ್ ಅಡಿ 15 ಹಾಲು ಒಕ್ಕೂಟಗಳು, 14,900 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಪ್ರತಿ ದಿನ 78.8 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೈನುಗಾರಿಕೆ ಈಗ ಅನೇಕ ಬಿಕ್ಕಟ್ಟುಗಳನ್ನು ಎದುರುಸುತ್ತಿದೆ’ ಎಂದು ಕೆಪಿಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಚನ್ನಬಸವಣ್ಣ ಹೇಳಿದರು.
ಲೀಟರ್ ಹಾಲಿನ ಉತ್ಪಾದನೆ ವೆಚ್ಚ ಸುಮಾರು ₹45 ತಲುಪಿದೆ. ರಾಜ್ಯ ಸರ್ಕಾರ 8 ತಿಂಗಳ ಪ್ರೋತ್ಸಾಹ ಧನ ತಡೆ ಹಿಡಿದಿದೆ. ಹಾಲು ಉತ್ಪಾದಕರನ್ನು ರಕ್ಷಿಸಿ, ಹೈನುಗಾರಿಕೆ ಉಳಿಸಬೇಕಾದ ಸರ್ಕಾರವೇ ಈ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಟ್ಟುಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಶು ಆಹಾರದ ಬೆಲೆ ಏರಿಕೆಯಾಗಿದ್ದು, ಹಾಲು ಉತ್ಪಾದನೆ ವೆಚ್ಚ ವಿಪರೀತ ಹೆಚ್ಚಳವಾಗಿದೆ. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಲೀಟರ್ ಹಾಲಿಗೆ ₹50 ನಿಗದಿ ಮಾಡಬೇಕು. ಹಾಲು ಉತ್ಪಾದಕರ ಮಕ್ಕಳಿಗಾಗಿ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಬೇಕು. ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ವ್ಯಾಪಕವಾಗಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕೆಪಿಆರ್ಎಸ್ ಉಪಾಧ್ಯಕ್ಷ ದೊಡ್ದನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಅಜ್ಜಪ್ಪ, ಕಾರ್ಯದರ್ಶಿ ಬಸವರಾಜ, ಮುಖಂಡರಾದ ನಾಗರಾಜು, ಎ.ಎಲ್.ಪರಮೇಶಯ್ಯ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.