ADVERTISEMENT

ತುಮಕೂರು: ನಂಜಾವಧೂತ ಸ್ವಾಮೀಜಿ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಮೇ 2024, 6:01 IST
Last Updated 5 ಮೇ 2024, 6:01 IST

ತುಮಕೂರು: ಹೈಕೋರ್ಟ್ ತೀರ್ಪಿನ ಅನುಸಾರ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನದ ಜವಾಬ್ದಾರಿಯಿಂದ ನಂಜಾವಧೂತ ಸ್ವಾಮೀಜಿಯನ್ನು ತೆರವುಗೊಳಿಸಬೇಕು ಎಂದು ವಕೀಲ ಟಿ.ಎಸ್.ರವಿ ಇಲ್ಲಿ ಶನಿವಾರ ಒತ್ತಾಯಿಸಿದರು.

‘03–08–1989ರ ವಿಲ್ಲನ್ನು ಆಧರಿಸಿ ನನಗೆ ಪ್ರೋಬೇಟ್ ನೀಡುವಂತೆ ಕೋರಿ ಸ್ವಾಮೀಜಿ, ಹೈಕೋರ್ಟ್‌ ಮೊರೆ ಹೋಗಿದ್ದರು. ಕಳೆದ ಮಾರ್ಚ್ 21ರಂದು ಪ್ರೋಬೇಟ್ ನಿರಾಕರಿಸಿ ಹೈಕೋರ್ಟ್ ಆದೇಶಿಸಿದೆ. ಈ ಆದೇಶದ ಪ್ರಕಾರ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನದ ಮೇಲೆ ಸ್ವಾಮೀಜಿಗೆ ಯಾವುದೇ ಹಕ್ಕು ಇರುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿನ್ನೆಲೆ: ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನವನ್ನು ಕುರುಬ ಸಮಾಜದ ಸೋಮೇಲಿಂಗಪ್ಪ, ಚೌಡಪ್ಪ, ಮರಿಯಣ್ಣ ಎಂಬುವರು 1886ರಲ್ಲಿ ನಿರ್ಮಿಸಿರುವುದು ಗೆಜೆಟ್‌ನಲ್ಲಿ ದಾಖಲಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗಾಗಿ ತಮಗೆ ಸೇರಿದ 250 ಎಕರೆ ಜಮೀನನ್ನು ದೇವರ ಹೆಸರಿನಲ್ಲಿರಿಸಲು ಉದ್ದೇಶಿಸಿದ್ದರು. ದೇಗುಲದ ವಿಧಿವಿಧಾನಗಳನ್ನು ನೋಡಿಕೊಳ್ಳಲು ಸ್ವಾಮಿ ಅರ್ಥದಲ್ಲಿ ನೇಮಕ ಮಾಡಿಕೊಂಡು ಬರಲಾಗಿದ್ದು, ಈವರೆಗೂ ಆರು ಮಂದಿ ನೇಮಕ ಮಾಡಲಾಗಿದೆ. ಕೊನೆಯದಾಗಿ ನೇಮಕಗೊಂಡ ಗುರುಕುಮಾರ ಅವಧೂತ ಸ್ವಾಮಿ ಈ ಜಮೀನು ಕಬಳಿಸಲು ಯತ್ನಿಸಿದ್ದರು ಎಂದು ಆರೋಪಿಸಿದರು.

ADVERTISEMENT

ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಗುರುಕುಮಾರ ಅವಧೂತ ಸ್ವಾಮಿ ಅವರು ಶಿರಾ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ತಮ್ಮ ಸಹೋದರನ ಪುತ್ರ ನಂಜಾವಧೂತ ಸ್ವಾಮಿಯನ್ನು ವಿಲ್ ಮೂಲಕ ನೇಮಕ ಮಾಡುವ ಪ್ರಯತ್ನ ಮಾಡಿದ್ದರು. ಗುರುಕುಮಾರ ಸ್ವಾಮಿ ಸಲ್ಲಿಸಿದ ಮನವಿಯನ್ನು ಶಿರಾ ಸಿವಿಲ್ ನ್ಯಾಯಾಲಯ ಅನೂರ್ಜಿತಗೊಳಿಸಿತ್ತು. ಈ ಸಂಬಂಧ ನಂಜಾವಧೂತ ಸ್ವಾಮೀಜಿ ಹೈಹೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಆದೇಶ ಬಂದಿದೆ ಎಂದು ಅವರು ವಿವರಿಸಿದರು.

ಕುರುಬ ಸಮುದಾಯದ ಮುಖಂಡರಾದ ಪಿ.ಸಿ.ಈಶ್ವರ್, ಶೇಖರ್, ಎಸ್.ಲಿಂಗಣ್ಣ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.