ADVERTISEMENT

ತುಮಕೂರು | ಮುನಿಸಿಪಲ್ ಕಾರ್ಮಿಕರ ಕಾಯಂಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:22 IST
Last Updated 2 ಜುಲೈ 2024, 4:22 IST

ತುಮಕೂರು: ಮುನಿಸಿಪಲ್ ಕಾರ್ಮಿಕರ ಸೇವೆ ಕಾಯಂ ಮಾಡಬೇಕು. ಕಾಯಂ ಮಾಡುವವರೆಗೂ ನೇರ ಪಾವತಿಯಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಮುನಿಸಿಪಲ್ ಕಾರ್ಮಿಕರ ಸಂಘ (ಸಿಐಟಿಯು) ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದ ಸಂಘದ ಮುಖಂಡರು, ದಶಕಗಳಿಂದ ಉಳಿದುಕೊಂಡು ಬಂದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳಲ್ಲಿ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಕ್ಲೀನರ್, ಒಳಚರಂಡಿ ಸ್ವಚ್ಛತೆ, ಪಾರ್ಕ್‌, ಸ್ಮಶಾನ, ಘನತ್ಯಾಜ್ಯ ವಿಲೇವಾರಿ ಘಟಕ, ಶೌಚಾಲಯ ಕಾರ್ಮಿಕರು, ಯುಜಿಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರು, ನೀರು ಸರಬರಾಜು ನೌಕರರು, ಕಂಪ್ಯೂಟರ್ ಸಿಬ್ಬಂದಿ ನಡುವೆ ತಾರತಮ್ಯ ಮಾಡದೆ ಒಂದೇ ಬಾರಿಗೆ ಕಾಯಂ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ, ನೀರು ಸರಬರಾಜು ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ. ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ವ್ಯವಸ್ಥೆಯು ಸರ್ಕಾರವೇ ನಡೆಸುತ್ತಿರುವ ಗುಲಾಮರ ಪದ್ಧತಿಯಾಗಿದೆ. ಇಂತಹ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಕಾಯಂ ಮಾಡಬೇಕು. ಆದರೆ ಕೆಲವು ಪೌರ ಕಾರ್ಮಿಕರನ್ನು ಮಾತ್ರ ಕಾಯಂ ಮಾಡಿ ಇತರೆ ಸಿಬ್ಬಂದಿಯನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದರು.

ನೇರ ಪಾವತಿಯಡಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬಗಳಿಗೆ ಯಾವುದೇ ನೆರವು ಸಿಗದೆ ಬೀದಿಗೆ ಬಿದ್ದಿವೆ. ತಕ್ಷಣ ಮೃತರ ಅವಲಂಬಿತರಿಗೆ ಕೆಲಸ, ಕಾನೂನು ಬದ್ಧ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.