ADVERTISEMENT

ಕುಣಿಗಲ್ | ಕುಂದುಕೊರತೆ ಸಭೆ: ಪರಿಶಿಷ್ಟರ ಜಮೀನು ವಿವಾದ ಬಗೆಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 14:21 IST
Last Updated 22 ಸೆಪ್ಟೆಂಬರ್ 2024, 14:21 IST
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಪರಿಶಿಷ್ಟರ ಸಮಸ್ಯೆ ಆಲಿಸಿದರು
ಕುಣಿಗಲ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಪರಿಶಿಷ್ಟರ ಸಮಸ್ಯೆ ಆಲಿಸಿದರು   

ಕುಣಿಗಲ್: ತಾಲ್ಲೂಕಿನಲ್ಲಿ ಪರಿಶಿಷ್ಟರ ಜಮೀನು ವಿವಾದಗಳು ಹೆಚ್ಚಾಗುತ್ತಿದ್ದು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಸಮಸ್ಯೆ ಬಗೆಹರಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಪರಿಶಿಷ್ಟರ ಜಮೀನಿಗೆ ಹೋಗಲು ನಕಾಶೆ ರಸ್ತೆಗಳಿದ್ದರೂ ಅತಿಕ್ರಮಣವಾಗುತ್ತಿದೆ. ದಲಿತರು ಉಳುಮೆ ಮಾಡುತ್ತಿರುವ ಜಮೀನು ಆಶ್ರಯ ಯೋಜನೆಯ ನಿವೇಶನ ಹಂಚಿಕೆಗೆ ವಶಪಡಿಸಿಕೊಳ್ಳಲಾಗಿದೆ. ದಲಿತರಿಗೆ ಭೂಮಿ ಮಂಜುರಾತಿಯಾಗಿದ್ದರೂ, ದಾಖಲೆ ನೀಡಿಲ್ಲ ಎಂದು ದಲಿತ ಮುಖಂಡ ವಿ.ಶಿವಶಂಕರ್ ದೂರಿದರು.

ADVERTISEMENT

ತಹಶೀಲ್ದಾರ್ ರಶ್ಮಿ ಪ್ರತಿಕ್ರಿಯಿಸಿ, ರಸ್ತೆ ವಿಚಾರವಾಗಿ ಈಗಾಗಲೇ 500 ಅರ್ಜಿಗಳು ಬಂದಿದ್ದು, 250 ಅರ್ಜಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲಾಗಿದೆ. ತಾಲ್ಲೂಕಿನಲ್ಲಿ ಆಶ್ರಯ ನಿವೇಶನ ಹಂಚಿಕೆಗೆ 118 ಗ್ರಾಮಗಳಲ್ಲಿ ಜಮೀನು ಗುರುತಿಸಲಾಗಿದೆ. ಇದರಲ್ಲಿ ಬಹುತೇಕ ದಲಿತರು ಉಳುಮೆ ಮಾಡುತ್ತಿರುವ ಜಮೀನು ನಿವೇಶನ ಹಂಚಿಕೆಗೆ ವಶಪಡಿಸಿಕೊಳ್ಳಲಾಗುತ್ತಿದೆ. ಸಮಸ್ಯೆಗಳು ಬಂದಾಗ ತಾಳ್ಮೆಯಿಂದ ವರ್ತಿಸಿ, ಸಹಕರಿಸಬೇಕು ಎಂದು ಮನವಿ ಮಾಡಿದರು.

ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸಲು ಕಂದಾಯ, ಸರ್ವೆ, ತಾಲ್ಲೂಕು ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತಾ ಆಚರಣೆ ತಡೆಗೆ ಪ್ರೌಢಶಾಲಾ ಮತ್ತು ಪದವಿಪಪೂರ್ವ ಶಿಕ್ಷಣ ಹಂತದಲ್ಲಿ ಜಾಗೃತಿ ಶಿಬಿರ ಆಯೋಜಿಸಿ, ದೇವಾಲಯಗಳಿಗೆ ಸಾಮೂಹಿಕವಾಗಿ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲು ದಲಿತ ಮುಖಂಡ ದಲಿತ್ ನಾರಾಯಣ್ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ್, ಸಿಪಿಐ ಮಾಧ್ಯಾ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.