ADVERTISEMENT

ತುಮಕೂರು: ನಾಳೆಯಿಂದ ದೇಸಿ ರಂಗೋತ್ಸವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 4:47 IST
Last Updated 26 ಫೆಬ್ರುವರಿ 2024, 4:47 IST

ತುಮಕೂರು: ಡಮರುಗ ರಂಗ ಸಂಪನ್ಮೂಲ ಕೇಂದ್ರದಿಂದ ತಾಲ್ಲೂಕಿನ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಐದು ದಿನಗಳ ರಾಜ್ಯ ಮಟ್ಟದ ದೇಸಿ ರಂಗೋತ್ಸವ ಏರ್ಪಡಿಸಲಾಗಿದೆ. ಫೆ.27ರಿಂದ ಮಾ.2ರ ವರೆಗೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿವೆ.

27ರಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆರ್ಥಿಕ ಸಾಕ್ಷರತಾ ಸಲಹೆಗಾರ ಎಸ್.ದಯಾನಂದ್‌, ಶಿಕ್ಷಕ ಸುರೇಂದ್ರನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬೆಳ್ಳಾವಿ ಶಿವಕುಮಾರ್, ಉಪನ್ಯಾಸಕಿ ಹೇಮಲತಾ ಭಾಗವಹಿಸಲಿದ್ದಾರೆ.

ಮೊದಲ ದಿನ ಮಧು ಮಳವಳ್ಳಿ ನಿರ್ದೇಶನದ ರಂಗಬಂಡಿ ಮಳವಳ್ಳಿ ತಂಡದಿಂದ ‘ಅನುರಕ್ತೆ’ ನಾಟಕ ಪ್ರದರ್ಶನಗೊಳ್ಳಲಿದೆ. ಫೆ.28ರಂದು ಸುಧಾ ನಂದಿ ನಿರ್ದೇಶನದ ‘ಕನಸಿನವರು’ ನಾಟಕವನ್ನು ದಾವಣಗೆರೆ ರಂಗ ಅನಿಕೇತನ ತಂಡವು ಪ್ರಸ್ತುತ ಪಡಿಸಲಿದೆ. ಫೆ.29 ರಂದು ದಾಕ್ಷಾಯಿಣಿ ಭಟ್‌ ನಿರ್ದೇಶನದಲ್ಲಿ ದೃಶ್ಯ ಬೆಂಗಳೂರು ತಂಡದಿಂದ ‘ಪೋಲಿಕಿಟ್ಟಿ’ ನಾಟಕ ಮೂಡಿಬರಲಿದೆ.

ADVERTISEMENT

ಮಾ.1ರಂದು ಮೆಳೇಹಳ್ಳಿ ದೇವರಾಜ್‌ ನಿರ್ದೇಶನದಲ್ಲಿ ಡಮರುಗ ರಂಗ ತಂಡದಿಂದ ‘ಮುಟ್ಟಾದಳೇ ಪುಟ್ಟಿ’ ನಾಟಕ ಪ್ರದರ್ಶನವಾಗಲಿದೆ. ಮಾ.2ರಂದು ಜಿ.ವಿ.ಪ್ರಸನ್ನ ನಿರ್ದೇಶಿಸಿರುವ ‘ಕಂಬ್ಳಿಸೇವೆ’ ನಾಟಕವನ್ನು ಆಯಾಮ ಬೆಂಗಳೂರು ತಂಡದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ ಎಂದು ಡಮರುಗ ರಂಗ ಸಂಪನ್ಮೂಲ ಕೇಂದ್ರದ ಸಂಸ್ಥಾಪಕ ಕಾರ್ಯದರ್ಶಿ ಮೆಳೇಹಳ್ಳಿ ದೇವರಾಜ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.