ತುರುವೇಕೆರೆ: ‘ಜಿಲ್ಲೆಯ ರೈತರ, ಜನಪ್ರತಿನಿಧಿಗಳ ವಿರೋಧದ ನಡುವೆಯೂ ಸರ್ಕಾರ ಪೊಲೀಸ್ ರಕ್ಷಣೆಯಲ್ಲಿ ಹೇಮಾವತಿ ಸಂಪರ್ಕ ಕಾಲುವೆ ಕಾಮಗಾರಿ ಮಾಡಲು ಹಠಕ್ಕೆ ಬಿದ್ದರೆ ಪೊಲೀಸರ ಲಾಟಿಗೆ ಹೆದರದೆ ನಾವು ಎಡೆಮಟ್ಟೆ ಸೇವೆ ಮಾಡುತ್ತೇವೆ’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪರ್ಕ ಕಾಲುವೆ ವಿರೋಧಿಸಿ ಪೈಪ್ಗಳನ್ನು ಹಿಂದಕ್ಕೆ ಕಳಿಸಿ ಕಾಮಗಾರಿ ನಿಲ್ಲಿಸಿ ಬಂದಿದ್ದೇವೆ. ಆದರೂ ಹೇಮಾವತಿ ಎಇಇ ಕಾಮಗಾರಿ ಪ್ರಾರಂಭಿಸಲು ಪೊಲೀಸ್ ಭದ್ರತೆ ಕೋರಿದ್ದಾರೆ. ಯಾವುದೇ ಸರ್ಕಾರ ಜನರ, ರೈತರ ಹಿತಕ್ಕಾಗಿ ಯೋಜನೆಗಳನ್ನು ಜಾರಿಗೆ ತರಬೇಕೆ ಹೊರತು ರೈತ ವಿರೋಧಿಯಾಗಬಾರದು ಎಂದರು.
ಮೂರು ಟಿಎಂಸಿ ನೀರು ನೀಡಲು ವಿರೋಧವಿಲ್ಲ. ಆದರೆ ಸರ್ಕಾರ ಹಠಕ್ಕೆ ಬಿದ್ದು ಕೆಲವು ಶಾಸಕರಿಗೆ ಅನುಕೂಲ ಮಾಡಲು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
‘ಉಪ ಮುಖ್ಯಮಂತ್ರಿ ಸಭೆ ಕರೆದಿದ್ದು, ನಾವು ಹೋಗಿದ್ದೆವು. ಸಭೆಯಲ್ಲಿ ಟೆಕ್ನಿಕಲ್ ಸಮಿತಿ ರಚಿಸಿ, ಸಮಿತಿ ವರದಿ ಬರುವವರೆಗೆ ಕಾಮಗಾರಿ ಮಾಡದಂತೆ ಸಲಹೆ ನೀಡಿದ್ದೆವು. ಆದರೆ ಸರ್ಕಾರ ಏಕಾಏಕಿ ಕೆಲಸ ಶುರು ಮಾಡಿರುವುದು ಖಂಡನೀಯ. ಪೊಲೀಸರನ್ನು ಬಳಸಿ ಕಾಮಗಾರಿ ಮಾಡಿಸಲು ಮುಂದಾಗಿದೆ. ಸರ್ಕಾರದ ಲಾಟಿಗೆಲ್ಲ ನಮ್ಮ ರೈತರು ಹೆದರುವುದಿಲ್ಲ. ಈ ಭಾಗದ ರೈತರಿಗೆ 500 ಟ್ರಕ್ ಎಡೆಮಟ್ಟೆ ತನ್ನಿ ಸರ್ಕಾರದ ಲಾಟಿ ಗೆಲ್ಲುತ್ತಾ ನಮ್ಮ ಎಡೆಮಟ್ಟೆ ಗೆಲ್ಲುತ್ತಾ ನೋಡೋಣ’ ಎಂದು ಸವಾಲು ಹಾಕಿದರು.
ಸರ್ಕಾರದ ಬೆದರಿಕಗೆ ಬಗ್ಗುವುದಿಲ್ಲ. ಕಾಮಗಾರಿ ಮಾಡುವುದಕ್ಕೆ ಬಿಡುವುದಿಲ್ಲ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಮುನಿಯೂರು ರಂಗಸ್ವಾಮಿ, ಶಿವಾನಂದ್, ಪರಮಶಿವಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.