ತಿಪಟೂರು: ನಾಫೆಡ್ ಮೂಲಕ ಉಂಡೆ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆ ಶುಕ್ರವಾರ ಸ್ಥಗಿತಗೊಂಡಿದ್ದರಿಂದ ರೈತರು ಅಧಿಕಾರಿಗಳು ವಿರುದ್ಧ ಹಿಡಿಶಾಪ ಹಾಕಿದರು.
ಕಳೆದ ಸೋಮವಾರವಷ್ಟೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ಹೆಚ್ಚು ಜನರಿಗೆ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ ಎಂದು ರೈತರು ದೂರಿದರು.
ನಗರದ ಎಪಿಎಂಸಿಯಲ್ಲಿ ಮೊದಲ ಎರಡು ದಿನ ಮಂದಗತಿಯಲ್ಲಿ ನೋಂದಣಿ ಪ್ರಾರಂಭವಾಗಿದ್ದು, ತಾಂತ್ರಿಕ ಸಮಸ್ಯೆ ಅರಿತ ಅಧಿಕಾರಿಗಳು ನಂತರದಲ್ಲಿ ಸರಿಪಡಿಸಿಕೊಂಡು ನೋಂದಣಿ ಚುರುಕುಗೊಳಿಸಿದರು. ಆದರೆ ಎರಡು ದಿನಗಳಲ್ಲಿ ರೈತರಿಗೆ ನ್ಯಾಯ ದೊರಕಿಸಲು ಸಾಧ್ಯವಾಗಿಲ್ಲ. ಇನ್ನೂ ಸಾವಿರಾರು ರೈತರು ನೋಂದಣಿಗೆ ಕಾದು ಕುಳಿತಿದ್ದು, 62,500 ಮೆಟ್ರಿಕ್ ಟನ್ ಮುಗಿದಿದೆ ಎಂದಾಗ ರೈತರು ಆಕ್ಷೇಪ ವ್ಯಕ್ತಪಡಿಸಿದರು.
ಅಕ್ರಮ ನೋಂದಣಿ ಶಂಕೆ: ರಾಜ್ಯದಲ್ಲಿ ಅಕ್ರಮವಾಗಿ ಉಂಡೆ ಕೊಬ್ಬರಿ ಖರೀದಿಗೆ ನೋಂದಣಿಗಳು ನಡೆದಿರುವ ಬಅಪಾದನೆ ಕೇಳಿ ಬಂದಿದೆ. ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ರೈತರಿಗೆ ನೊಂದಣಿಗೆ ಅವಕಾಶ ಕಲ್ಪಿಸಬೇಕಿದೆ. ಪ್ರತಿ ರೈತರ ಬಳಿಯಿಂದ ಶೇ 25ರಷ್ಟು ಅಂದರೆ ಐದು ಕ್ವಿಂಟಲ್ ಕೊಬ್ಬರಿಯನ್ನು ಖರೀದಿಸಬೇಕು. ಆಗ ಮಾತ್ರವೇ ತೆಂಗು ಬೆಳೆದ ಎಲ್ಲ ರೈತರ ಬಳಿಯಿಂದಲೂ ಕೊಬ್ಬರಿ ಖರೀದಿ ಮಾಡಲು ಸಾಧ್ಯ. ಇನ್ನೂ ಸಾವಿರಾರು ರೈತರು ನೋಂದಣಿಯಿಂದ ವಂಚಿತರಾಗಿದ್ದಾರೆ ಎಂದು ರೈತ ಸಂಘದ ವರಿಷ್ಠ ಯೋಗೀಶ್ವರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.