ಶಿರಾ: ನಗರದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಅರ್ಧದಷ್ಟು ಕಸ ಸುಟ್ಟು ಹೋಗಿದೆ.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳದಲ್ಲಿದ್ದ ಸಿಬ್ಬಂದಿ ಅಗ್ನಿಶಾಮಕ ದಳ ಹಾಗೂ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೌರಾಯುಕ್ತ ರುದ್ರೇಶ್ ಅವರು ಅಗ್ನಿಶಾಮಕ ಸಿಬ್ಬಂದಿ ಜೊತೆ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬೆಂಕಿ ವ್ಯಾಪಕವಾಗಿ ಅವರಿಸಿಕೊಂಡು ಅರ್ಧದಷ್ಟು ಕಸ ಸುಟ್ಟು ಹೋಗಿದೆ.
‘ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ನಗರಸಭೆ ಸಿಬ್ಬಂದಿಯೇ ಕಸಕ್ಕೆ ಬೆಂಕಿ ಹಚ್ಚಿದ್ದಾರೆ. ಇಲ್ಲಿ ಇವರು 15 ದಿನಕ್ಕೊಮ್ಮೆ ಬೆಂಕಿ ಹಚ್ಚುತ್ತಿದ್ದು ಈ ಬಾರಿ ಸಹ ಬೆಂಕಿ ಹಾಕಿದಾಗ ವ್ಯಾಪಕವಾಗಿ ಆವರಿಸಿದೆ’ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ಸಾರ್ವಜನಿಕರ ಆರೋಪ ನಿರಾಕರಿಸಿರುವ ನಗರಸಭೆ ಸಿಬ್ಬಂದಿ, ‘ಕಸದಲ್ಲಿರುವ ಗಾಜಿನ ಬಾಟಲಿಗಳು ಬಿಸಲಿಗೆ ಕಾದು ಸ್ಫೋಟಗೊಂಡ ಪರಿಣಾಮ ಬೆಂಕಿ ಹತ್ತಿಕೊಂಡಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಟ್ಟದ ರೀತಿಯಲ್ಲಿ ಕಸದ ರಾಶಿ ಬಿದ್ದಿದ್ದು ಅದರ ವಿಲೇವಾರಿ ಸವಾಲಾಗಿದೆ. ನಿತ್ಯ ನಗರದಲ್ಲಿ ಸಂಗ್ರಹವಾದ ಕಸವನ್ನು ಘಟಕದಲ್ಲಿ ಸುರಿಯುತ್ತಿದ್ದು ಅದರ ವಿಲೇವಾರಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಕಸದ ರಾಶಿಯೇ ಬಿದ್ದಿದೆ. ಪ್ರತಿವರ್ಷ ಘಟಕ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ವಿಲೇವಾರಿ ಮಾಡಲು ನಗರಸಭೆ ಆಡಳಿತ ವಿಫಲವಾಗಿದೆ. ಕಸದ ಹೆಸರಿನಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.